ರಾಜ್ಯ ಬಜೆಟಿನಲ್ಲಿ ಅಡಿಕೆ ಕೃಷಿಕರಿಗೆ ನೆರವು: ಕ್ಯಾಂಪ್ಕೋ ಸ್ವಾಗತ

ಪುತ್ತೂರು: ಹಳದಿ ಎಲೆ ಮತ್ತು ಎಲೆಚುಕ್ಕಿ ರೋಗದ ಸಂಶೋಧನೆಗಾಗಿ ತೀರ್ಥಹಳ್ಳಿಯ ತೋಟಗಾರಿಕಾ ಇಲಾಖೆಯ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನಕ್ಕೆ (1ARDF) 10 ಕೋಟಿ ರೂ. ಅನುದಾನ ಘೋಷಿಸಿರುವ ರಾಜ್ಯ ಸರಕಾರದ ಕ್ರಮವನ್ನು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಸ್ವಾಗತಿಸಿದ್ದಾರೆ.

ರಾಜ್ಯ ಬಜೆಟಿನಲ್ಲಿ ಅಡಿಕೆಗೆ ಅನುದಾನ ಘೋಷಿಸಿರುವ ರಾಜ್ಯ ಸರಕಾರದ ಕ್ರಮ, ಸರಕಾರಕ್ಕೆ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಗುಣ ಹಾಗೂ ಬದ್ಧತೆಯನ್ನು ತೋರಿಸುತ್ತದೆ ಎಂದಿರುವ ಅವರು, ಕೃಷಿಯಲ್ಲಿ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪದ್ಧತಿಗಳ ಅಳವಡಿಕೆಗೆ ಉತ್ತೇಜನ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ರಫ್ತಿಗೆ ಒತ್ತು ನೀಡುವ ಮೂಲಕ ಸಮಗ್ರ ಕೃಷಿ ಪದ್ಧತಿಯ ಉತ್ತೇಜನಕ್ಕೆ ಬಜೆಟಿನಲ್ಲಿ ಪ್ರೋತ್ಸಾಹ ನೀಡಲಾಗಿದೆ ಎಂದಿದ್ದಾರೆ.

3 ಲಕ್ಷ ರೂ.ನಿಂದ 5 ಲಕ್ಷ ರೂ.ನವರೆಗೆ ಬಡ್ಡಿರಹಿತ ಸಾಲ, ಉತ್ತರ ಕರ್ನಾಟಕದ ರೈತರಿಗೆ ಸಹಾಯಧನ, ನೀರಾವರಿಗೆ ಅತೀ ಹೆಚ್ಚಿನ ಹಣ ಮಂಜೂರು, ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ಮುಂತಾದ ಯೋಜನೆಗಳ ಮೂಲಕ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಜೆಟಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಪಶು ಸಂಗೋಪನೆಗೆ ಅನುದಾನದಲ್ಲಿ ಹೆಚ್ಚಳ, ಶಿಕ್ಷಣ, ವೈದ್ಯಕೀಯ ಮತ್ತು ಆಡಳಿತ ಸುಧಾರಣೆಗೆ ಒತ್ತು ನೀಡಿ ಸಾಮಾನ್ಯ ಜನರ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಮಂಡನೆ ಮಾಡಲಾಗಿದೆ. ಒಟ್ಟಾರೆ ನೇಗಿಲ ಯೋಗಿಯ ನೆರವಿಗೆ ಒತ್ತು ನೀಡಲಾಗಿದೆ. ಕೃಷಿ ಮತ್ತು ಉಳಿದ ಎಲ್ಲಾ ರಂಗಗಳಿಗೂ ಅನುದಾನ ನೀಡುವುದರ ಮೂಲಕ ಸಮತೋಲನ ಹೊಂದಿರುವ ಅತ್ಯುತ್ತಮ ಬಜೆಟ್ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top