ನಮ್ಮ ಸಾಮರ್ಥ್ಯವನ್ನು ಅರಿತುಕೊಂಡರೆ ನಾವೂ ʼಸ್ವಯಂಮೇವ ಮೃಗೇಂದ್ರತಾʼ

ನಾವು ಒಳಗಿನಿಂದ ಹೊರಗೆ ಬೆಳೆಯುತ್ತಾ ಹೋಗಬೇಕು

ಕಾಡಿನಲ್ಲಿ ಸಿಂಹಕ್ಕೆ ಯಾರೂ ಪಟ್ಟಾಭಿಷೇಕವನ್ನು ಮಾಡುವುದಿಲ್ಲ. ಯಾರೂ ಕಿರೀಟ ಧಾರಣೆ ಮಾಡುವುದಿಲ್ಲ. ಸಿಂಹ ತನ್ನ ಸ್ವಯಂ ಸಾಮರ್ಥ್ಯಗಳನ್ನು ಉದ್ದೀಪನ ಮಾಡಿಕೊಂಡು ‘ಮೃಗಗಳ ರಾಜ’ ಎಂದು ಎಲ್ಲರಿಂದಲೂ ಕರೆಸಿಕೊಳ್ಳುತ್ತದೆ. ಹೀಗೆಂದು ಹೇಳುತ್ತದೆ ಒಂದು ಸಂಸ್ಕೃತದ ಸುಭಾಷಿತ.

ಕಾಡಿನಲ್ಲಿ ಸಿಂಹಕ್ಕಿಂತ ಬಲಿಷ್ಠವಾದ ಅದೆಷ್ಟೋ ಪ್ರಾಣಿಗಳು ಇವೆ. ಆದರೂ ಸಿಂಹವು ತನ್ನ ಗತ್ತು, ಗೈರತ್ತು, ಗಾಂಭೀರ್ಯ, ನಡಿಗೆ ಮತ್ತು ನೋಟಗಳಿಂದ ‘ಕಾಡಿನ ರಾಜ’ ಎಂದು ಕರೆಸಿಕೊಳ್ಳುತ್ತದೆ. ನಾವೂ ನಮ್ಮ ಸಾಮರ್ಥ್ಯಗಳ ಅರಿವನ್ನು ಮೂಡಿಸಿಕೊಂಡರೆ ಖಂಡಿತವಾಗಿ ಸಿಂಹಸದೃಶ ವ್ಯಕ್ತಿತ್ವವನ್ನು ಪಡೆಯಬಹುದು. ಅದಕ್ಕೆ ಇಲ್ಲಿವೆ ಅತ್ಯಂತ ಸರಳವಾದ 12 ಸೂತ್ರಗಳು.

































 
 

1) ನಿಮ್ಮ ಸಾಮರ್ಥ್ಯಗಳನ್ನು ಅರಿಯಿರಿ (Strengths)

ನಮ್ಮ ಸಾಮರ್ಥ್ಯಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ. ನಾವು ಯಾವ ಕೆಲಸವನ್ನು ಚೆನ್ನಾಗಿ ಮಾಡುತ್ತೇವೆ ಅನ್ನುವುದು ಎಲ್ಲರಿಗಿಂತ ಮೊದಲು ನಮಗೆ ಗೊತ್ತಿರಬೇಕು. ನಾವು ಯಾವ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯ ಇದೆ ಅನ್ನುವುದು ನಮಗೆ ಆದಷ್ಟು ಬೇಗ ಗೊತ್ತಾಗಬೇಕು.

2) ನಮ್ಮ ಪರಿಮಿತಿಯನ್ನು ಒಪ್ಪಿಕೊಳ್ಳಿ (Limits)

ಯಾವುದನ್ನು ನಾವು ಮಾಡಲು ಸಾಧ್ಯ ಇಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳುವುದು ತುಂಬಾನೆ ಮುಖ್ಯ. ಯಾವುದೇ ವ್ಯಕ್ತಿ ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಯಾವುದು ನನ್ನಿಂದ ಸಾಧ್ಯವಿಲ್ಲ ಎಂದು ಗೊತ್ತಾದರೆ ನಮ್ಮ ಸಮಯ, ನಮ್ಮ ಶ್ರಮ, ನಮ್ಮ ಎನರ್ಜಿ ಉಳಿಯುತ್ತದೆ.

3) ನಮ್ಮ ವಿಧಿ ಮತ್ತು ನಿಷೇಧಗಳು (Do’s and Don’ts)

ನಮ್ಮ ಸಮಾಜ ನಮಗೆ ವಿಧಿಸಿದ ವಿಧಿ (Do’s) ಮತ್ತು ನಿಷೇಧಗಳನ್ನು (Don’ts) ನಾವು ಅಷ್ಟು ಬೇಗ ಮೀರಿ ಹೋಗುವುದು ಕಷ್ಟ. ಇವುಗಳನ್ನು ಸಾಂಪ್ರದಾಯಿಕ ಮೌಲ್ಯಗಳು ಅನ್ನುತ್ತೇವೆ. ಈ ವಿಧಿ ಮತ್ತು ನಿಷೇಧಗಳು ನಮ್ಮನ್ನು ಯಾವಾಗಲೂ ಗೆಲುವಿನ ಕಡೆಗೆ ಮುನ್ನಡೆಸುತ್ತವೆ.

4)ನಿರಂತರ ಅಧ್ಯಯನದ ಹಸಿವು (Knowledge Gain)

ಇಂದು ಜ್ಞಾನವನ್ನು ಸಂಪಾದನೆ ಮಾಡಲು ನಮಗೆ ಹೆಚ್ಚು ಅವಕಾಶಗಳು ಇವೆ. ಪುಸ್ತಕಗಳು ನಮಗೆ ಅಪಾರವಾದ ಜ್ಞಾನವನ್ನು ಕೊಡುತ್ತವೆ. ಇಂದು ಗೂಗಲ್, ವಿಕಿಪೀಡಿಯಾ ಮೂಲಕ ಕೂಡ ಹೆಚ್ಚು ಜ್ಞಾನವನ್ನು ಸಂಪಾದನೆ ಸಾಧ್ಯ ಆಗುತ್ತದೆ. ಏನಿದ್ದರೂ ನಾವು ಸಂಪಾದನೆ ಮಾಡಿದ ಜ್ಞಾನ ನಿರಂತರ ಹೊರಮುಖವಾಗಿ ಹರಿಯಲು ತೊಡಗಿದರೆ ಮಾತ್ರ ಆ ಜ್ಞಾನ ನಮಗೆ ಒಂದು ಪ್ರಬಲ ಅಸ್ತ್ರ ಆದೀತು.

೫) ನಮ್ಮ ಕೌಶಲಗಳು (Skills)

ಸ್ವ ಸಬಲೀಕರಣ ಎಂದು ನಾವು ಹೊರಡುವಾಗ ಇಂದು ಜ್ಞಾನವನ್ನು ಕೌಶಲಗಳು ಮೀರಿಸುತ್ತವೆ. ಅದರಲ್ಲಿ ಕೂಡ ಸಂವಹನ ಕೌಶಲ, ನಿರೂಪಣಾ ಕೌಶಲ, ವಿವಿಧ ಭಾಷಾ ಕೌಶಲಗಳು, ಯಾಂತ್ರಿಕ ಕೌಶಲಗಳು ಇಂದು ಜಗತ್ತನ್ನು ಆಳುತ್ತಿರುವುದು ನನ್ನ ಗಮನಕ್ಕೆ ಬಂದಿವೆ. ಅದರಲ್ಲಿಯೂ ಸಂವಹನ ಕೌಶಲವನ್ನು (Communication) ಕೌಶಲಗಳ ರಾಜ ಎಂದು ಕರೆಯುತ್ತಾರೆ.

6) ನಮ್ಮ ಸಂಬಂಧಗಳು (Relations)

ನಮ್ಮ ಸಂಬಂಧಗಳಲ್ಲಿ ಕೆಲವು ಸಂಬಂಧಗಳು ಕೇವಲ ಆಫಿಷಿಯಲ್ (Official) ಆಗಿರುತ್ತವೆ. ಇನ್ನೂ ಕೆಲವು ಕ್ಯಾಶುವಲ್ (Casual) ಆಗಿರುತ್ತವೆ. ಕೆಲವೇ ಕೆಲವು ಸಂಬಂಧಗಳು ಭಾವನಾತ್ಮಕ (Emotional) ಆಗಿರುತ್ತವೆ. ನಮ್ಮ ಭಾವನೆಗಳ ಅತ್ಯಂತ ಒಳಗಿನ ವರ್ತುಲದಲ್ಲಿ ಕುಳಿತು ನಮಗೆ ಕನೆಕ್ಟ್ ಆದವರು ನಮಗೆ ಪಾಸಿಟಿವ್ ಎನರ್ಜಿ ಕೊಡುತ್ತಾರೆ.

7) ನಮ್ಮ ನಂಬಿಕೆಗಳು (Faiths)

ನಮ್ಮಲ್ಲಿ ಮುಖ್ಯವಾಗಿ ಎರಡು ವಿಧವಾದ ನಂಬಿಕೆಗಳು ಇರುತ್ತವೆ. ಒಂದು ನಮ್ಮ ಮೇಲೆ ಬೇರೆಯವರು ಆರೋಪಿಸಿರುವುದು (Induced). ಇನ್ನೊಂದು ನಾವು ಅರಿವಿನ ಮೂಲಕ ಒಪ್ಪಿಕೊಂಡದ್ದು (Self Realised). ಅದರಲ್ಲಿ ನಾವು ಅರಿವಿನ ಮೂಲಕ ಒಪ್ಪಿಕೊಂಡ ನಂಬಿಕೆಗಳು ನಮಗೆ ದಾರಿದೀಪ ಆಗುತ್ತವೆ.

8) ನಮ್ಮ ನಿರ್ಧಾರಗಳು (Decisions)

ಗೊಂದಲದ ಮನಸ್ಸಿನವರು (Fluctuating minds) ನಿರ್ಧಾರ ತೆಗೆದುಕೊಳ್ಳಲು ಸೋಲುತ್ತಾರೆ. ಆದರೆ ಗಟ್ಟಿ ಇಚ್ಛಾಶಕ್ತಿ ಇರುವವರು ಸರಿಯಾದ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಮತ್ತು ಆ ನಿರ್ಧಾರವನ್ನು ಉಳಿಸಿಕೊಳ್ಳುತ್ತಾರೆ. ತುಂಬಾ ಭಾವನಾತ್ಮಕ ಸಂದರ್ಭಗಳಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ಸೋಲುತ್ತವೆ ಅನ್ನುತ್ತದೆ ನನ್ನ ಅನುಭವ.

9) ನಮ್ಮ ಮಾರ್ಗದರ್ಶಕರು (Mentors)

ಜೀವನದ ಯಾವುದೇ ಹಂತದಲ್ಲಿ ಕೂಡ ನಮಗೆ ಮಾರ್ಗದರ್ಶಕರು ಬೇಕು. ಎಲ್ಲ ಹಂತಗಳಲ್ಲಿ ತಪ್ಪು ಮಾಡಿ ಕಲಿಯುವ ಕಲಿಕೆ ಒಳ್ಳೆಯದಲ್ಲ. ಹದಿಹರೆಯದಲ್ಲಿ ನಾವು ಹೆಚ್ಚು Self Experiment ಮಾಡಲು ಹೊರಡುತ್ತೇವೆ. ಆಗ ಸಹಜವಾದ ತಪ್ಪುಗಳು ನಡೆಯುತ್ತವೆ. ಆಗ ನಾವು ಮೆಂಟರ್‌ಗಳ ಅಭಿಪ್ರಾಯಗಳನ್ನು ಹೆಚ್ಚು ಮುಕ್ತವಾಗಿ ಸ್ವೀಕರಿಸಿ ಅನುಷ್ಠಾನ ಮಾಡಿಕೊಂಡರೆ ಒಳಗಿಂದ ಗಟ್ಟಿಯಾಗುತ್ತಾ ಹೋಗುತ್ತೇವೆ.

10) ನಮ್ಮ ಸ್ಮಾರ್ಟ್ ಗುರಿಗಳು (Smart Goals)

ನಮ್ಮ ಯಶಸ್ಸಿನ ಪ್ರಯಾಣದಲ್ಲಿ ಮೈಲುಗಲ್ಲುಗಳಾಗಿ ನಿಲ್ಲುವುದು ನಮ್ಮ SMART ಗುರಿಗಳು. S ಅಂದರೆ Specific, M ಅಂದರೆ Mesurable, A ಅಂದರೆ Achievable, R ಅಂದರೆ Realistic , T ಅಂದರೆ Time Bound. ಅದರಲ್ಲಿ ಕೂಡ ಅಲ್ಪಕಾಲೀನ ಮತ್ತು ದೀರ್ಘಕಾಲೀನ ಎಂಬ ಎರಡು ವಿಧವಾದ ಗುರಿಗಳು ಇವೆ. ನಮ್ಮ ಗುರಿಗಳನ್ನು ಬರೆದಿಟ್ಟರೆ ಅವುಗಳನ್ನು ಸುಲಭದಲ್ಲಿ ತಲುಪಲು ಸಾಧ್ಯ ಆಗುತ್ತದೆ.

11) ನಮ್ಮ ಮಾನಸಿಕ ಸ್ಥಿತಿ (ಮೈಂಡ್ ಸೆಟ್)

ಸೋಲು ಅಥವಾ ಗೆಲುವನ್ನು ನಾವು ಹೇಗೆ ಸ್ವೀಕಾರ ಮಾಡುತ್ತೇವೆ ಅನ್ನುವುದು ನಮ್ಮ ಯಶಸ್ಸಿನ ಖಚಿತವಾದ ಅಂಶ. ಗೆಲುವು ನಮಗೆ ಅಹಂ ಕೊಡಬಹುದು. ಆದರೆ ಸೋಲು ನಮಗೆ ಅನುಭವವನ್ನು ಕೊಟ್ಟು ಒಳಗಿಂದ ಸ್ಟ್ರಾಂಗ್ ಮಾಡುತ್ತದೆ. ನಮ್ಮ ಯಾವುದೇ ಬೆಳವಣಿಗೆ ಒಳಗಿನಿಂದ ಹೊರಗೆ ಆಗಬೇಕು. ನಾವು ಬದುಕನ್ನು ಹೇಗೆ ನೋಡುತ್ತೇವೆ ಅನ್ನೋದರ ಮೇಲೆ ನಮ್ಮ ಯಶಸ್ಸು ಅಡಗಿದೆ.

12) ಆತ್ಮ ಜಾಗೃತಿ (Self Realisation)

ನಾನೇನು? ನನ್ನ ಜೀವನದ ಉದ್ದೇಶ ಏನು? ಅನ್ನುವುದನ್ನು ನಾವು ಆದಷ್ಟು ಬೇಗ ಅರ್ಥ ಮಾಡಿಕೊಳ್ಳಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಅಮೆರಿಕದ ಸರ್ವಧರ್ಮ ಸಭೆಯಲ್ಲಿ ಭಾಷಣ ಮಾಡಿದ ನಂತರ ವಿವೇಕಾನಂದರ ಬದುಕಿನಲ್ಲಿ ಆದ ತಿರುವುಗಳನ್ನು ನಾವು ನೋಡಿದ್ದೇವೆ. ಅದಕ್ಕೆ ಕಾರಣ ಅವರಲ್ಲಿ ಆಗಿದ್ದ ಆತ್ಮಜಾಗೃತಿ. ಈ ಹಂತಕ್ಕೆ ತಲುಪಿದ ನಂತರ ನಾವು ಐಕಾನ್ ಆಗುತ್ತೇವೆ. ಅಲ್ಲಿಂದ ಮುಂದೆ ನಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯ ಆಗುವುದಿಲ್ಲ.

ಭರತವಾಕ್ಯ

ನಾವು ಇವತ್ತು ಏನಾಗಿದ್ದೇವೆಯೋ ಅದಕ್ಕೆ ಕಾರಣ ನಮ್ಮ ಯೋಚನೆಗಳು ಮತ್ತು ಭಾವನೆಗಳು. ಇವೆರಡನ್ನೂ ಸರಿ ಮಾಡಿಕೊಂಡರೆ ನಮ್ಮ ಬದುಕು ತುಂಬಾನೆ ಅರ್ಥಪೂರ್ಣ ಮತ್ತು ಸುಂದರವಾಗುತ್ತದೆ. ಅಲ್ಲವೇ?

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top