ಆನ್‌ಲೈನ್‌ ನೋಂದಣಿ ಇಲ್ಲದಿದ್ದರೂ ಸಿಗಲಿದೆ ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ

ಜನಾಕ್ರೋಶಕ್ಕೆ ಮಣಿದು ನಿಯಮ ಸಡಿಲಿಸಿದ ಕೇರಳ ಸರಕಾರ

ತಿರುವನಂತಪುರ: ಈ ಸಲ ಶಬರಿಮಲೆಯಲ್ಲಿ ಆನ್‌ಲೈನ್‌ ನೋಂದಣಿ ಮಾಡಿಸಿಕೊಂಡವರಿಗೆ ಮಾತ್ರ ದೇವರ ದರ್ಶನ ಅವಕಾಶ ಎಂಬ ನಿಯಮಕ್ಕೆ ವ್ಯಕ್ತವಾದ ಭಾರಿ ಆಕ್ರೋಶಕ್ಕೆ ಮಣಿದಿರುವ ಕೇರಳ ಸರಕಾರ ಈಗ ಆನ್‌ಲೈನ್‌ ನೋಂದಣಿ ಇಲ್ಲದೇ ಇದ್ದರೂ ಸ್ಪಾಟ್‌ ನೋಂದಣಿ ಮೂಲಕ ದರ್ಶನ ಪಡೆಯಲು ಅವಕಾಶ ಕಲ್ಪಿಸಿದೆ. ಇದರಿಂದ ದರ್ಶನ ತಪ್ಪಿಸಿಕೊಳ್ಳುವ ಆತಂಕದಲ್ಲಿದ್ದ ಭಕ್ತರು ನಿರಾಳವಾಗಿದ್ದಾರೆ.
ನೋಂದಣಿ ಇಲ್ಲದೇ ಏಕಾಏಕಿ ಬರುವ ಭಕ್ತರನ್ನು ನಿಯಂತ್ರಿಸಿ ನೂಕುನುಗ್ಗಲು ಆಗುವುದನ್ನು ತಪ್ಪಿಸುವ ಉದ್ದೇಶದಿಂದ ಕೇರಳ ಸರ್ಕಾರ ಶಬರಿಮಲೆ ದರ್ಶನಕ್ಕೆ ಬರುವವರಿಗೆ ಈ ವರ್ಷದಿಂದ ಆನ್‌ಲೈನ್‌ ನೋಂದಣಿ ಮಾಡಿಸಿಕೊಂಡವರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡುವುದಾಗಿ ಆದೇಶ ಜಾರಿಗೊಳಿಸಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದರಿಂದ ನೋಂದಣಿಯಲ್ಲಿ ಕೆಲವು ವಿನಾಯಿತಿ ನೀಡಿದೆ.
ವರ್ಚುವಲ್‌ ಆಗಿ ಕ್ಯೂ ಬುಕಿಂಗ್‌ ಮಾಡದೆ ಆಗಮಿಸಿದ್ದರೂ ಶಬರಿಮಲೆಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಅಯ್ಯಪ್ಪ ದೇವಸ್ಥಾನದಲ್ಲಿ ಸುಗಮ ದರ್ಶನ ವ್ಯವಸ್ಥೆ ಮಾಡಲಾಗುವುದು. ಶಬರಿಮಲೆಗೆ ಭೇಟಿ ನೀಡುವ ಯಾವ ಭಕ್ತರೂ ನಿರಾಶರಾಗುವುದು ಬೇಡ ಎಂದು ಕೇರಳ ಸರಕಾರ ಕೊನೆಗೂ ಸ್ಪಷ್ಟನೆ ನೀಡಿದೆ. ಆನ್‌ಲೈನ್‌ ನೋಂದಣಿ ಹಾಗೂ ದಿನಕ್ಕೆ ದರ್ಶನಕ್ಕೆ ಮಿತಿ ಹೇರುವ ಆದೇಶಕ್ಕೆ ಕೇರಳ ಕಾಂಗ್ರೆಸ್‌ ಹಾಗೂ ಸಿಪಿಐ(ಎಂ) ವಿರೋಧ ವ್ಯಕ್ತಪಡಿಸಿ ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಿದ್ದವು.
ಈಗ ಸ್ಪಾಟ್‌ ಬುಕ್ಕಿಂಗ್‌ ಕೇಂದ್ರಗಳೂ ಇರಲಿವೆ. ಅಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಆನಂತರವೂ ಅವಕಾಶ ಸಿಗದಿದ್ದರೆ ವಿಶೇಷ ದರ್ಶನ ಇರಲಿದ್ದು. ಪ್ರತಿ ಭಕ್ತನಿಗೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ವಿವಾದದ ನಂತರ ಸರ್ಕಾರ ಸ್ಪಷ್ಟನೆ ನೀಡಿದೆ.
ಯಾತ್ರಿಕರಿಗೆ ಬುಕಿಂಗ್ ಸಮಯದಲ್ಲಿ ಪ್ರಯಾಣದ ಮಾರ್ಗವನ್ನು ಆಯ್ಕೆ ಮಾಡುವ ಅವಕಾಶವನ್ನು ಒದಗಿಸಲಾಗುತ್ತದೆ. ಹೀಗಾಗಿ, ಯಾತ್ರಿಕರು ಕಡಿಮೆ ದಟ್ಟಣೆ ಇರುವ ಮಾರ್ಗವನ್ನು ಆಯ್ಕೆ ಮಾಡಬಹುದು. ಸಾಂಪ್ರದಾಯಿಕ ಅರಣ್ಯ ಮಾರ್ಗದಲ್ಲಿ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಜನದಟ್ಟಣೆ ಇರುವ ಸಮಯದಲ್ಲಿ ವಾಹನಗಳನ್ನು ನಿಯಂತ್ರಿಸಬೇಕಾದರೆ ಕೇಂದ್ರಗಳನ್ನು ಗುರುತಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು. ನಿಲಕ್ಕಲ್ ಮತ್ತು ಎರುಮೇಲಿಯಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ವಂ ಸಚಿವ ವಿ.ಎನ್ ವಾಸವನ್ ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top