ಮತ್ತೆ ದಕ್ಷಿಣ ಭಾರತ, ಉತ್ತರ ಭಾರತ ವಾದ ಎತ್ತಿದ ಡಿ.ಕೆ.ಸುರೇಶ್‌

ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿವುದರಿಂದ ಪ್ರತ್ಯೇಕತೆಯ ಕೂಗು ಎಂದು ವಾದ

ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್‌ ಮತ್ತೆ ದಕ್ಷಿಣ ಭಾರತ, ಉತ್ತರ ಭಾರತ ಪ್ರತ್ಯೇಕತೆಯ ಕುರಿತು ವಾದ ಮಂಡಿಸಿದ್ದಾರೆ. ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯವಾಗಿದೆ ಎನ್ನಲು ತಮ್ಮ ಹಿಂದಿನ ದಕ್ಷಿಣ ಭಾರತ ಪ್ರತ್ಯೇಕ ವಾದವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.
ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿರುವ ಬಗ್ಗೆ ಕಳೆದ ಬಾರಿಯೇ ವಿಷಯ ಪ್ರಸ್ತಾಪ ಮಾಡಿದ್ದೆ. ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಹೇಳಿದ್ದೆ ಹೊರತು ಪ್ರತ್ಯೇಕ ದಕ್ಷಿಣ ಭಾರತ ನನ್ನ ಕೂಗಲ್ಲ. ತಮಿಳುನಾಡಿನಲ್ಲಿ ಬಹಳ ಹಿಂದೆಯೇ ಈ ಕೂಗು ಇತ್ತು. ಈಗ ಮತ್ತೆ ಅನ್ಯಾಯ ಮಾಡಿ ಕೂಗು ಏಳಿಸಬೇಡಿ. ನಾವು ಭಾರತಾಂಬೆಯ ಮಕ್ಕಳು. ನಮ್ಮನ್ನು ದೂರ ಮಾಡುವ ಪ್ರಯತ್ನ ಮಾಡಬೇಡಿ ಎಂದು ಡಿ.ಕೆ ಸುರೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗುರುವಾರ ಕೇಂದ್ರ ಸರ್ಕಾರ ತೆರಿಗೆ ಹಣ ಬಿಡುಗಡೆ ಮಾಡಿದೆ. ದಕ್ಷಿಣ ಭಾರತಕ್ಕೆ 28,152 ಕೋಟಿ ರೂ. ನೀಡಿದೆ. ಉತ್ತರ ಪ್ರದೇಶವೊಂದಕ್ಕೇ 32 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ. ಈ ಮೂಲಕ ಪದೇಪದೆ ಕೆಣಕುವ ಪ್ರಯತ್ನ ನಡೆಯುತ್ತಿದೆ. ದುಃಖದಿಂದ ಈ ಮಾತು ಹೇಳಬೇಕಿದೆ. ರಾಜ್ಯದ ಅಭಿವೃದ್ಧಿಗೆ ಅನ್ಯಾಯವಾಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದರು.
ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಬೆಂಬಲ ಇದೆ, ಆದರೆ ಇಲ್ಲಿನ ನಾಯಕರು ಧ್ವನಿ ಎತ್ತುತ್ತಿಲ್ಲ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತಕ್ಕೆ ಹೆಚ್ಚಿನ ತೆರಿಗೆ ನೀಡಿ. ಕರ್ನಾಟಕದಿಂದ ಬಿಜೆಪಿಯ 19 ಸಂಸದರು ಆಯ್ಕೆಯಾಗಿದ್ದಾರೆ. ಈ ಸಂಸದರು ಧ್ವನಿ ಎತ್ತುತ್ತಿಲ್ಲ. ನಾನು ಒತ್ತಾಯ ಮಾಡುತ್ತೇನೆ, ನಿಮ್ಮ ನೀತಿ ಬದಲಾವಣೆ ಮಾಡಿ. ರಾಜ್ಯಕ್ಕೆ, ದಕ್ಷಿಣ ಭಾರತಕ್ಕೆ ಹೆಚ್ಚಿನ ತೆರಿಗೆ ನೀಡಿ ಎಂದು ಒತ್ತಾಯಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top