ಮಂಗಳೂರು: ಉಪನ್ಯಾಸಕ ಅರುಣ್ ಉಳ್ಳಾಲ್ ಅವರು ನೀಡಿರುವ ಒಂದು ವಿಡಿಯೋ ಹೇಳಿಕೆಯನ್ನು ತಿರುಚಿ ಅವರನ್ನು ತೇಜೋವಧೆ ಮಾಡುತ್ತಿರುವ ಸಂಗತಿ ಸಂಘಟನೆಯ ಗಮನಕ್ಕೆ ಬಂದಿದ್ದು, ಕೆಲವು ಕಿಡಿಗೇಡಿಗಳು ಈ ವಿಡಿಯೋವನ್ನು ಮುಂದಿಟ್ಟುಕೊಂಡು ಡಾಕ್ಟರ್ ಅರುಣ್ ಉಳ್ಳಾಲ್ ಅವರ ಮೇಲೆ ಪೊಲೀಸರಿಂದ ಸುಮೊಟೊ ಪ್ರಕರಣ ದಾಖಲಿಸುವ ಕೃತ್ಯದಲ್ಲೂ ಯಶಸ್ವಿಯಾಗಿರುತ್ತಾರೆ. ತಾಕತ್ತಿದ್ದರೆ ರಾಜ್ಯಪಾಲರ ಭವನಕ್ಕೆ ಬಾಂಗ್ಲಾ ಮಾದರಿ ನುಗ್ಗುತ್ತೇವೆ ಎಂದ ಐವನ್ ಡಿಸೋಜಾ ಮೇಲೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಲಿ ಎಂದು ಶ್ರೀಕಾಂತ್ ಶೆಟ್ಟಿ ಕಾರ್ಕಳ ಕಿಡಿಕಾರಿದ್ದಾರೆ.
ಅವರು ನಗರದ ಖಾಸಗಿ ಹೋಟೆಲಿನಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಾ. ಅರುಣ್ ಉಳ್ಳಾಲ್ ಅವರು ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದು ತಮ್ಮ ಉತ್ತಮ ನಡವಳಿಕೆಯ ಜೊತೆಗೆ ಜನಪದ ಮತ್ತು ಸಂಸ್ಕೃತಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಾವಿರಾರು ಕಾರ್ಯಕ್ರಮಗಳಲ್ಲಿ ತಮ್ಮ ವಿಚಾರವನ್ನು ಪ್ರಸ್ತುತಪಡಿಸುತ್ತಾ ಬಂದಿದ್ದಾರೆ.
ಉತ್ತಮ ನಿರೂಪಕರಾಗಿರುವ ಅವರು ಸಾವಿರಾರು ಮಕ್ಕಳಿಗೆ ಧರ್ಮ ಶಿಕ್ಷಣ ನೀಡುವ ಅಭಿಯಾನವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅವರ ಸಾಮಾಜಿಕ ಕ್ರಾಂತಿಯಿಂದ ವಿಚಲಿತರಾಗಿರುವ ಹಿಂದೂ ವಿರೋಧಿ ಶಕ್ತಿಗಳು ತೇಜೋವಧೆಗೆ ಹಲವಾರು ಸಮಯದಿಂದ ಸಂಚು ರೂಪಿಸಿದ್ದಾರೆ. ವಿವಾದಿತ ವಿಡಿಯೋದಲ್ಲಿ ಅರುಣ್ ಉಳ್ಳಾಲ್ ಅವರು ಹಿಂದುಗಳು ತಮ್ಮ ಮಕ್ಕಳನ್ನು ಹಿಂದೂ ಸಾಂಸ್ಕೃತಿಕ ಹಿನ್ನೆಲೆ ಇರುವ ಶಾಲೆಗಳಿಗೆ ಸೇರಿಸಬೇಕು ಎಂದು ಹೇಳಿದ್ದಾರೆ. ಹಿಂದುಗಳು ತಮ್ಮ ಶುಭ ಕಾರ್ಯಗಳನ್ನು ದೇವಸ್ಥಾನಗಳ ವಠಾರದಲ್ಲಿ ಮಾಡಬೇಕು ಎಂದಿದ್ದಾರೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಪ್ರತಿಯೊಬ್ಬ ನಾಗರೀಕನಿಗೂ ಈ ಸ್ವಾತಂತ್ರ್ಯವಿದೆ. ತನ್ನ ಧರ್ಮ ಸಂಸ್ಕೃತಿಗಳ ಉಳಿವಿಗಾಗಿ ಹಿಂದೂ ಪೋಷಕರು ತಮ್ಮ ಮಕ್ಕಳನ್ನು ಹಿಂದೂ ಜೀವನ ಪದ್ದತಿಯನ್ನು ಬೋಧಿಸುವ ಶಿಕ್ಷಣ ಕೇಂದ್ರಗಳಿಗೆ ಕಳುಹಿಸಿದರೆ, ಇದರಿಂದ ಅನ್ಯಮತೀಯರ ಭಾವನೆಗಳಿಗೆ ಧಕ್ಕೆ ಹೇಗಾಗುತ್ತದೆ? ಎಂದು ಪ್ರಶ್ನಿಸಿದ ಅವರು, ಶುಭ ಸಮಾರಂಭಗಳನ್ನು ಯಾವ ಹಾಲಿನಲ್ಲಿ ಮಾಡಬೇಕು ಎನ್ನುವುದು ಸಂಪೂರ್ಣ ಆರ್ಥಿಕ ವಿಚಾರವಾಗಿರುತ್ತದೆ.
ಇದರ ಬಗ್ಗೆ ನಿರ್ಣಯ ಕೈಗೊಳ್ಳಲು ಹಿಂದೂ ಸಮಾಜಕ್ಕೆ ಸಂಪೂರ್ಣ ಸ್ವಾತಂತ್ರವಿದೆ. ಅರುಣ್ ಉಳ್ಳಾಲ್ ಅವರು ಮಾತನಾಡಿರುವುದು ಖಾಸಗಿ ಕಾರ್ಯಕ್ರಮದಲ್ಲಿ ಆದ ಕಾರಣ ಅವರು ಖಾಸಗಿಯಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದು ಹಿಂದೂ ಸಮಾಜದ ಅಂತರಿಕ ವಿಚಾರವಾಗಿದ್ದು ಇದರಲ್ಲಿ ಮಿಷನರಿಗಳು, ಕಮ್ಯುನಿಷ್ಟರು ಮತ್ತು ಮತಾಂಧ ಮುಸಲ್ಮಾನರು ಮೂಗು ತೂರಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇನ್ನು ಪೊಲೀಸ್ ಇಲಾಖೆ ಈ ವಿಷಯಕ್ಕೆ ನೀಡಿದಷ್ಟು ಮಹತ್ವವನ್ನು ಈ ಹಿಂದೆ ಯಾವುದೇ ವಿವಾದಾಸ್ಪದ ವಿಡಿಯೋಗಳ ಬಗ್ಗೆ ಕೈಗೊಂಡ ಉದಾಹರಣೆ ಇಲ್ಲ.
ಈ ಹಿಂದೆ ಐವನ್ ಡಿಸೋಜಾ ರಾಜ್ಯಪಾಲರ ಭವನಕ್ಕೆ ಬಾಂಗ್ಲಾ ಮಾದರಿಯಲ್ಲಿ ನುಗ್ಗುತ್ತೇವೆ ಎಂದಾಗ ಪೊಲೀಸರು ಯಾಕೆ ಸುಮೋಟೋ ಕೇಸ್ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದರು.
























