ಕಾಂತಾರ-2 ಓಸ್ಕರ್ಗೆ ಸ್ಪರ್ಧಿಸುವ ನಿರೀಕ್ಷೆ
ಬೆಂಗಳೂರು : ಯಶಸ್ವಿ ಸಿನೆಮಾ ಕಾಂತಾರ ಈ ಸಲ ಪ್ರತಿಷ್ಠಿತ ಓಸ್ಕರ್ ಪ್ರಶಸ್ತೆಗೆ ನಾಮಿನೇಟ್ ಆಗುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ ಆಯಕೆ ಸುತ್ತಿನಲ್ಲಿ ಚಿತ್ರ ಹೊರಬಿದ್ದು ಕನ್ನಡಿಗರು ಬಹಳಷ್ಟು ನಿರಾಶೆ ಅನುಭವಿಸಿದ್ದಾರೆ. ಕಾಂತಾರ ಓಸ್ಕರ್ ಸ್ಪರ್ಧೆಯಿಂದ ಹೊರಬೀಳಲು ಕಾರಣ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಿಯಾದ ಪ್ರಚಾರ ಸಿಗದಿರುವುದು ಎಂದು ಅಭಿಪ್ರಾಯಪಟ್ಟಿದ್ದಾರೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್.
ಕಾಂತಾರ ಸಿನಿಮಾ ಸೆಪ್ಟೆಂಬರ್ ಕೊನೆಗೆ ಬಿಡುಗಡೆ ಆಗಿತ್ತು. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಾರ್ಡ್ಸ್ ನಾಮಿನೇಷನ್ ಹೊತ್ತಿಗೆ ಸಿನೆಮಾದ ಬಗ್ಗೆ ಪ್ರಚಾರ ಮಾಡಲು ಸಾಧ್ಯವಾಗಲಿಲ್ಲ. ಹೊರ ದೇಶಗಳಲ್ಲಿ ಪ್ರದರ್ಶನ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಚಿತ್ರಕ್ಕೆ ಮತಗಳು ಸಿಕ್ಕಿಲ್ಲ. ಸರಿಯಾದ ಪ್ರಚಾರ ಇಲ್ಲದ ಕಾರಣಕ್ಕೆ ಆಸ್ಕರ್ ಗೋಲ್ಡನ್ ಗ್ಲೋಬ್ ರೀತಿಯ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ನಾಮಿನೇಟ್ ಆಗಿಲ್ಲ. RRR ಸಿನಿಮಾ ರಿಲೀಸ್ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮೋಟ್ ಮಾಡಲು ಅವರಿಗೆ ಬಹಳ ಸಮಯ ಸಿಕ್ಕಿತ್ತು ಎಂದಿದ್ದಾರೆ.
ನಾವು ಆಸ್ಕರ್ ಅಥವಾ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಹೋಗುವಲ್ಲಿ ಎಲ್ಲಿ ವಿಫಲವಾಗಿದ್ದೇವೆ ಎನ್ನುವುದು ಗೊತ್ತಾಗಿದೆ. ಮುಂದಿನ ಬಾರಿ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ. ಎಲ್ಲಾ ವಿಧದಲ್ಲೂ ಕಾಂತಾರ ಎರಡನೆ ಭಾಗವನ್ನು ದೊಡ್ಡಮಟ್ಟದಲ್ಲಿ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತೇವೆ ಎಂದು ವಿಜಯ್ ಕಿರಗಂದೂರ್ ಹೇಳಿದ್ದಾರೆ. ಕಾಂತಾರ-2 ಶೀಘ್ರದಲ್ಲೇ ಸೆಟ್ಟೇರಲಿದೆ. ಮುಂದಿನ ವರ್ಷದ ಮಧ್ಯದ ವೇಳೆಗೆ ಬಿಡುಗಡೆಯಾಗಲಿದೆ.
ಮಾರ್ಕೆಟಿಂಗ್ ಬಹಳ ಮುಖ್ಯ. ರಾಜಮೌಳಿ ರೀತಿಯ ಫಿಲ್ಮ್ ಮೇಕರ್ಸ್ ಬಹಳ ದೊಡ್ಡದಾಗಿ ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ. ಒಳ್ಳೆ ಕಂಟೆಂಟ್ ಇದ್ದು ಮಾರ್ಕೆಟಿಂಗ್ ಸರಿಯಾಗಿ ಮಾಡದಿದ್ದರೆ ದೊಡ್ಡ ಸಂಖ್ಯೆಯಲ್ಲಿ ಜನ ಬಂದು ಸಿನಿಮಾ ನೋಡಲ್ಲ. KGF ಚಿತ್ರದ ವಿಚಾರದಲ್ಲಿ ಇದ್ದನ್ನೇ ಮಾಡಿದ್ದೆವು. ನಾವು ಚಾಪ್ಟರ್- 1 ಪ್ರಚಾರಕ್ಕೆ ಹೆಚ್ಚು ಸಮಯ ವ್ಯಯಿಸಿದ್ದೆವು. ಸಾಕಷ್ಟು ಶ್ರಮ ಹಾಕಿದ್ದೆವು. ಚಾಪ್ಟರ್- 2 ವಿಚಾರದಲ್ಲೂ ಇದನ್ನೇ ಮಾಡಿದ್ದೆವು. ಮೊದಲೆಲ್ಲಾ ದಕ್ಷಿಣದಲ್ಲಿ ಒಳ್ಳೆ ಸಿನಿಮಾ ಬರುತ್ತಿರಲಿಲ್ಲ ಅಂತ ಹೇಳಲು ಸಾಧ್ಯವಿಲ್ಲ. ಆದರೆ ಅವರು ಮಾರ್ಕೆಟಿಂಗ್ ಮಾಡುತ್ತಿರಲಿಲ್ಲ. ಒಳ್ಳೆ ಪ್ರಾಡೆಕ್ಟ್ ಜತೆಗೆ ಪ್ರಮೋಷನ್ ಮಾಡಿದರೆ ಸಕ್ಸಸ್ ಸಿಗುತ್ತೆ ಎಂದು ಹೇಳಿದ್ದಾರೆ.
























