ಪುತ್ತೂರು: ತಾಲೂಕು ಕೆಯ್ಯೂರು ಗ್ರಾಮದ ತೆಗ್ಗು ಎರೆಕಲಾ ಪ್ರದೇಶಕ್ಕೆ ಕಾಡಾನೆಗಳು ದಾಳಿ ಮಾಡಿದ್ದು, ಈ ಪ್ರದೇಶದ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಗುರುವಾರ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಆನೆ ಹಿಂಡುಗಳು ಠಿಕಾಣಿ ಹೂಡಿ ಕೃಷಿಕರಿಗೆ ಭಯದ ವಾತಾವರಣ ಉಂಟು ಮಾಡಿದೆ. ಸರಕಾರ ಆನೆಕಂದಕ, ರಕ್ಷಣಾ, ಸೋಲಾರ್ ಬೇಲಿಗಳನ್ನು ಅಳವಡಿಸುವ ಮೂಲಕ ಸೂಕ್ತ ರಕ್ಷಣೆ ನೀಡಬೇಕಾಗಿದೆ. ತಕ್ಷಣ ಆನೆಗಳನ್ನು ಹಿಡಿದು ಬೇರೆಡೆ ಕಾಡಿಗೆ ಬಿಡಲು ಕ್ರಮ ಕೈಗೊಳ್ಳುವ ಮೂಲಕ ಮತ್ತೊಮ್ಮೆ ಆನೆ ಬರದಂತೆ ತಡೆಹಿಡಿಯಬೇಕಾಗಿದೆ ಎಂದ ಅವರು, ಇಲ್ಲಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ನೇಮಕ ಮಾಡಿ ಗಸ್ತು ತಿರುಗುವ ಕೆಲಸ ಮಾಡುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ಕೃಷಿಕರು ನೇಮ್ಮದಿ ಜೀವನ ಮಾಡಲು, ಕೃಷಿಗೆ ಹಾನಿಯಾಗದ ಹಾಗೆ ಕ್ರಮ ಕೈಗೊಳ್ಗಬೇಕು. ಈಗಾಗಲೇ ಹಾನಿಗೊಳಗಾದ ಕೃಷಿಕರಿಗೆ ಪರಿಹಾರ ನೀಡುವ ಕೆಲಸ ಸರಕಾರದಿಂದ ಆಗಬೇಕು ಎಂದು ಒತ್ತಾಯಿಸಿದ ಅವರು, ಇಲ್ಲಿ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಬಿಜೆಪಿ ಪಕ್ಷ ಕೃಷಿಕರ ಪರವಾಗಿ ಹೋರಾಟ ಮಾಡಲು ಸಿದ್ಧವಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಕೃಷಿಕ ಸಮಾಜ ಅಧ್ಯಕ್ಷ ವಿಜಯ್ ಕುಮಾರ್ ಕೋರಂಗ, ಒಳಮೊಗ್ರು ಶಕ್ತಿಕೇಂದ್ರ ಪ್ರಮುಖ ರಾಜೇಶ್ ರೈ ಪುರ್ಪುoಜಾ , ಬೂತ್ ಅಧ್ಯಕ್ಷ ಮೋಹನ್ ಗೌಡ ಎರೆಕಲಾ, ಶುಭಪ್ರಕಾಶ್ ಎರೆಕಲಾ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು
























