ಪುತ್ತೂರು: ಮುಂಗಾರು ಮಳೆಗೆ ಪೂರ್ವಭಾವಿಯಾಗಿ ನಗರ ಸಭಾ ವ್ಯಾಪ್ತಿಯಲ್ಲಿರುವ ರಾಜಕಾಲುವೆಗಳ ಸ್ವಚ್ಚಗೊಳಿಸುವ ಕಾಮಕಾರಿಯು ಪ್ರಾರಂಭಗೊಂಡಿದ್ದು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮರ್ಪಕವಾಗಿ ನಡೆಸುವಂತೆ ನಗರ ಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಾರಂಭದಲ್ಲಿ ನೆಲ್ಲಿಕಟ್ಟೆ ಹಿಂದು ರುದ್ರಭೂಮಿ ಸಮಿಪದಲ್ಲಿ ಹಾದುಹೋಗುವ ರಾಜ ಕಾಲುವೆಯನ್ನು ವೀಕ್ಷಣೆ ಮಾಡಿದರು. ನಂತರ ಮುಖ್ಯರಸ್ತೆಯ ಗಣೇಶ್ ಪ್ರಸಾದ್ ಹೊಟೇಲ್ ಬಳಿ ನಂತರ ಎಪಿಎಂಸಿ ರಸ್ತೆಯಲ್ಲಿರುವ ರಾಜ ಕಾಲುವೆಗಳ ಬಳಿಗೆ ತೆರಳಿ ಕಾಮಗಾರಿಯ ಪರಿಶೀಲನೆ ನಡೆಸಿದರು.
ರಾಜ ಕಾಲುವೆ ಸ್ವಚ್ಛಗೊಳಿಸುವ ಕಾಮಗಾರಿಯ ಬಗ್ಗೆ ನಗರ ಸಭಾ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಹಾಯಕ ಆಯುಕ್ತರು ಸ್ವಚ್ಛಗೊಳಿಸುವ ಕಾಮಗಾರಿಯನ್ನು ಶೀಘ್ರವಾಗಿ ಹಾಗೂ ಸಮಪರ್ಕವಾಗಿ ನಡೆಸುವಂತೆ ಸೂಚನೆ ನೀಡಿದರು. ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸಮರ್ಪಕವಾಗಿ ನೀರು ಪೂರೈಸಲು ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಸಹಾಯಕ ಆಯುಕ್ತರು, ಮಳೆಗಾಲದ ಪೂರ್ವಭಾವಿಯಾಗಿ ರಾಜಕಾಲುವೆಗಳನ್ನು ಶುಚಿಗೊಳಿಸಲಾಗುತ್ತಿದೆ. ರಾಜಕಾಲುವೆಗಳಲ್ಲಿ ತ್ಯಾಜ್ಯ ತುಂಬಿರುವುದು ಕಂಡು ಬಂದಿರುವುದಲ್ಲದೆ ದೂರುಗಳೂ ಬಂದಿತ್ತು. ಕಳೆದ ವರ್ಷವೂ ನಗರ ಸಭೆಯಿಂದ ರೂ.10 ಲಕ್ಷದಲ್ಲಿ ರಾಜ ಕಾಲುವೆಗಳನ್ನು ಶುಚಿಗೊಳಿಸಲಾಗಿದೆ. ಈ ವರ್ಷ ಪುತ್ತೂರು ಜಾತ್ರೆಯ ಸಮಯದಲ್ಲಿ ದೇವಸ್ಥಾನದ ಸುತ್ತ ಮುತ್ತ ರಾಜ ಕಾಲುವೆಗಳನ್ನು ಸ್ವಚ್ಛಗೊಳಿಸಲಾಗಿದೆ. ಪ್ರಥಮ ಮಳೆಗೆ ತ್ಯಾಜ್ಯಗಳು ಬರುವುದು ಸಾಮಾನ್ಯ. ಆದರೂ ಕಾಳಜಿ ವಹಿಸಿಕೊಂಡು ಕ್ರಮವಹಿಸಲಾಗಿದೆ. ಈ ಹಿಂದೆ ನೆರೆಬರುವಂತ ಪ್ರದೇಶಗಳನ್ನು ಪಟ್ಟಿ ಮಾಡಿಕೊಂಡು ಅಲ್ಲಿ ಪ್ರಥಮವಾಗಿ ಜೆಸಿಬಿ ಮೂಲಕ ಸ್ವಚ್ಛಗೊಳಿಸುವ ಕಾರ್ಯ ನಗರ ಸಭೆಯಿಂದ ಪ್ರಾರಂಭಿಸಲಾಗಿದೆ. 2-3ವಾರದಿಂದ ಕುಡಿಯುವ ನೀರಿನ ಜೊತೆಗೆ ಪರಿಹಾರ ಮತ್ತು ಮುಂಗಾರು ಮಳೆಗೆ ಪೂರ್ವಭಾವಿಯಾಗಿ ರಾಜಕಾಲುವೆಗಳನ್ನು ಸ್ವಚ್ಚಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ತಹಶೀಲ್ದಾರ್ ಕುಂಞಿ ಅಹಮ್ಮದ್, ನಗರ ಸಭಾ ಪೌರಾಯುಕ್ತ ಬದ್ರುದ್ದಿನ್ ಸೌದಾಗರ, ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ದುರ್ಗಾ ಪ್ರಸಾದ್, ಶಬರಿನಾಥ್ ರೈ, ಸಹಾಯಕ ಅಭಿಯಂತರ ಕೃಷ್ಣ ಮೂರ್ತಿ ರೆಡ್ಡಿ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ ಕೆ, ಶ್ವೇತಾಕಿರಣ್, ನಗರಸಭೆ ನೀರು ಸರಬರಾಜು ವಿಭಾಗ ಜಲಸಿರಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಾದೇಶ್, ಇಂಜಿನಿಯರ್ ಗೌತಮ್, ಸಹಾಯಕ ಇಂಜಿನಿಯರ್ ಸುನೀಲ್ ಮೊದಲಾದವರು ಉಪಸ್ಥಿತರಿದ್ದರು.

























