ಮಾಣಿ ಬ್ರಹ್ಮಕಲಶೋತ್ಸವ: ಸುವರ್ಣ ಮಂಟಪದಲ್ಲಿ ರಾಮದೇವರ ಪೂಜೆ

ಪುತ್ತೂರು: ಮಾಣಿ ಶ್ರೀ ರಾಮಚಂದ್ರಾಪುರ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಶಿಲಾಮಯ ಗರ್ಭಾಗಾರದಲ್ಲಿ ಸಪರಿವಾರ ಸಹಿತ ರಾಮದೇವರ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ಅಂಗವಾಗಿ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸಪರಿವಾರ ಸಹಿತ ಶ್ರೀ ಸೀತಾರಾಮಚಂದ್ರ, ಚಂದ್ರಮೌಳೀಶ್ವರ ಮತ್ತು ರಾಜರಾಜೇಶ್ವರಿ ದೇವರಿಗೆ ಸುವರ್ಣ ಮಂಟಪದಲ್ಲಿ ವಿಶೇಷ ಪೂಜೆ ಮತ್ತು ಅಷ್ಟಾವಧಾನ ಸೇವೆ ನಡೆಯಿತು.

ಸೋಮವಾರ ಪುನಃಪ್ರತಿಷ್ಠೆಯ ಬಳಿಕ ಮಂಗಳವಾರ ಮಹಾಶಾಂತಿ ಹವನ, ಪ್ರಾಯಶ್ಚಿತ ಹವನ, ಸೂಕ್ತಹವನ, ನವಚಂಡೀಹವನ ಮತ್ತು ಐಕಮತ್ಯ ಹವನ ಗೋಕರ್ಣದ ತಂತ್ರಿಗಳಾದ ಶ್ರೀ ಅಮೃತೇಶ ಭಟ್ಟ ಹಿರೇ ಅವರ ನೇತೃತ್ವದಲ್ಲಿ ನಡೆದವು. ಶ್ರೀಮಠದ ಧರ್ಮಕರ್ಮ ವಿಭಾಗದ ಮುಖ್ಯಸ್ಥ ಕೇಶವ ಭಟ್ ಕೂಟೇಲು, ಅಮೈ ಶಿವಪ್ರಸಾದ್ ಭಟ್ ಮತ್ತಿತರರು ಪಾಲ್ಗೊಂಡಿದ್ದರು. ಸಂಜೆ ಕುಂಭೇಶ ಪೂಜೆ, ರಾಜೋಪಚಾರ ಸೇವೆ ಮತ್ತು ಶ್ರೀದುರ್ಗಾಪೂಜೆ ವಿಧ್ಯುಕ್ತವಾಗಿ ನೆರವೇರಿತು.





























 
 

ಮಾಘಮಾಸ ಶುಕ್ಲ ಚತುರ್ಥಿಯಂದು ಅಂದರೆ ಬುಧವಾರ ಶ್ರೀ ರಾಘವೇಶ್ವರ ಭಾರತೀಸ್ವಾಮೀಜಿಯವರಿಂದ ಬ್ರಹ್ಮಕಲಶೋತ್ಸವ ನಡೆಯಲಿದೆ. ಬುಧವಾರ ಮೂಲಮಂತ್ರ ಹವನ, ಸೂಕ್ತಹವನ, ಗಣಪತಿ ಅಥರ್ವಶೀರ್ಷ ಹವನ, ಶ್ರೀ ರುದ್ರಹವನ, ಪರಿವಾರ ದೇವರಿಗೆ ನವಕಾಭಿಷೇಕ ನಡೆಯಲಿದೆ ಎಂದು ಶ್ರೀಮಠದ ಮಹಾಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಮತ್ತು ಕಾರ್ಯದರ್ಶಿ ಬಂಗಾರಡ್ಕ ಜನಾರ್ದನ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,ಮಧ್ಯಾಹ್ನ ಬ್ರಹ್ಮಕಲಶದ ಬಳಿಕ ನಿಯನೈಮಿತ್ತಿಕ ನಿರ್ಣಯ, ಪ್ರಾರ್ಥನೆ, ಪ್ರಸಾದ ವಿತರಣೆ, ಸಂಜೆ ಆಶ್ಲೇಷ ಬಲಿ ಇರುತ್ತದೆ. ಸಾವಿರಾರು ಮಂದಿ ಭಕ್ತರು ಸುವರ್ಣ ಮಂಟಪದಲ್ಲಿ ವಿರಾಜಮಾನರಾದ ರಾಮದೇವರನ್ನು ನೋಡಿ ಕಣ್ತುಂಬಿಕೊಂಡರು. ಬೆಳಿಗ್ಗೆ ವಿವಿಧ ತಂಡಗಳಿಂದ ಭಜನೆ, ಸಂಜೆ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top