ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಮಹಾಲಿಂಗೇಶ್ವರ ಗೋಸೇವಾ ಬಳಗದ ನೇತೃತ್ವದಲ್ಲಿ ಗೋಲೋಕೋತ್ಸವ ಫೆ. 3 ಹಾಗೂ 4ರಂದು ಕುರಿಯ ಗ್ರಾಮದ ಸಂಪ್ಯದಮೂಲೆಯ ಮೊಟ್ಟೆತ್ತಡ್ಕ ಎನ್.ಆರ್.ಸಿ.ಸಿ. ಬಳಿ ಗೋವಿಹಾರ ಧಾಮದಲ್ಲಿ ನಡೆಯಲಿದೆ.
ಗೋಲೋಕೋತ್ಸವ ಅಂಗವಾಗಿ ಫೆ. 3 ಶನಿವಾರ ಬೆಳಿಗ್ಗೆ 7.30ರಿಂದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಗಣಪತಿ ಹೋಮ, ಗೋಸೂಕ್ತ ಹೋಮ, ಗೋಪೂಜೆ, ಮಧ್ಯಾಹ್ನ 2ರಿಂದ ಭಜನೆ, ಕುಣಿತ ಭಜನೆ ನಡೆಯಲಿದೆ.
ಸಂಜೆ 4ರಿಂದ ಮೊಟ್ಟೆತ್ತಡ್ಕ ನೃತ್ಯರಂಜಿನಿ ಕಲಾಲಯ ವತಿಯಿಂದ ನೃತ್ಯರೂಪಕ ‘ಕಾಳಿಂಗ ಮರ್ದನ-ಗೋಪಿಕೃಷ್ಣ’ ಪ್ರದರ್ಶನಗೊಳ್ಳಲಿದೆ. ಸಂಜೆ 5ರಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಾವೋ ರಕ್ಷತಿ ರಕ್ಷಿತಃ, ಸಂಜೆ 6ರಿಂದ ಡಾ.ವಿದ್ಯಾಭೂಷಣ ಬೆಂಗಳೂರು ಅವರಿಂದ ಭಕ್ತಿ ಭಾವ ಲಹರಿ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























