ಹುಲಿ ದಾಳಿಗೆ ಸಿಲುಕಿದ ವ್ಯಕ್ತಿಯೋರ್ವನ ಮೃತದೇಹ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಆಡಿನ ಕಣಿವೆ ಸಮೀಪದಲ್ಲಿ ಪತ್ತೆಯಾಗಿರುವ ಘಟನೆ ಮಂಗಳವಾರ ನಡೆದಿದೆ.
ಆಡಿನಕಣಿವೆಯ ಬಸವಯ್ಯ (54) ಮೃತ ವ್ಯಕ್ತಿ.
ಬಸವಯ್ಯ ಬುಡಕಟ್ಟು ಜನಾಂಗಕ್ಕೆ ಸೇರಿದವನು. ಎರಡು ದಿನಗಳ ಹಿಂದೆ ಕುರಿಗಳನ್ನು ಮೇಯಿಸಲು ಕಾಡಿಗೆ ತೆರಳಿದ್ದ. ನಂತರ ಮನೆಗೆ ವಾಪಾಸ್ಸಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಅಭಯಾರಣ್ಯದ ಒಳಗೆ ಮೃತದೇಹ ಪತ್ತೆಯಾಗಿದೆ. ಆತನ ಕಾಲು, ಎದೆಯ ಭಾಗವನ್ನು ಹುಲಿ ತಿಂದು ಹಾಕಿದ್ದು, ಕೇವಲ ಹೊಟ್ಟೆ ಭಾಗವನ್ನು ಮಾತ್ರ ಬಿಟ್ಟಿದೆ. ಮುಕ್ಕಾಲು ಭಾಗ ತಿಂದು ಬಿಟ್ಟ ಮೃತದೇಹ ಕಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಘಟನೆ ಕುರಿತು ಕುಟುಂಬಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
























