ಕಡಬ: ರೈತರ ದೈನಂದಿನ ಅಗತ್ಯಗಳಿಗೆ ಪೂರಕವಾಗಿ ಸ್ಪಂದಿಸುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಗ್ರಾಮೀಣ ರೈತರ ಬದುಕಿನ ಜೀವನಾಡಿಯಾಗಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅವರು ಶನಿವಾರ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮರ್ದಾಳ ಶಾಖಾ ಕಚೇರಿಯ ಆವರಣದಲ್ಲಿ ನಬಾರ್ಡ್ ನೆರವಿನೊಂದಿಗೆ 60 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗೋದಾಮು ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ರೈತರಿಗೆ ಸಹಕಾರಿ ಸಂಘಗಳ ಸವಲತ್ತುಗಳು ಸರಕಾರದ ಯೋಜನೆಗಳಿಗಿಂತಲೂ ಹೆಚ್ಚು ಪ್ರಯೋಜನಕಾರಿಯಾಗಿವೆ. ಮನೆಯ ಮದುವೆ, ಶುಭ ಸಮಾರಂಭ, ತುರ್ತು ಅಗತ್ಯಗಳು ಸೇರಿದಂತೆ ಯಾವುದೇ ತೊಂದರೆಗಳು ಎದುರಾದರೂ ಕೃಷಿಕರಿಗೆ ಆರ್ಥಿಕ ವ್ಯವಹಾರಗಳಿಂದ ಹಿಡಿದು ಕೃಷಿ ಕಾರ್ಯಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡುವ ಸಹಕಾರಿ ಸಂಘಗಳು ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಶತಮಾನದ ಸಂಭ್ರಮವನ್ನು ದಾಟಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಜನಪರ ಕಾಳಜಿಯ ಕಾರ್ಯಚಟುವಟಿಕೆಗಳು ಶ್ಲಾಘನಾರ್ಹ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಫಲಕ ಅನಾವರಣ ಮಾಡಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಮಾತನಾಡಿ ಜಿಲ್ಲೆಯ ಕೃಷಿ ಪತ್ತಿನ ಸಹಕಾರಿ ಸಂಘಗಳ ಪೈಕಿ ಕಡಬದ ಸಹಕಾರಿ ಸಂಘವು ತನ್ನ ವ್ಯವಸ್ಥಿತ ಕಾರ್ಯಯೋಜನೆಗಳಿಂದ ತನ್ನದೇ ಆದ ಪ್ರತ್ಯೇಕ ಅಸ್ತಿತ್ವವನ್ನು ಹೊಂದಿದೆ. ಜನರಿಗೆ ನೆರವಾಗುವ ಸಲುವಾಗಿ ಸಹಕಾರಿ ಸಂಘಗಳ ಸಾಂದ್ರದಾಯಿಕ ಕೆಲಸಗಳ ಜೊತೆಗೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರದ ಸ್ಥಾಪನೆ, ಅಗತ್ಯವಿರುವವರಿಗೆ ಶವ ದಹನ ಪೆಟ್ಟಿಗೆಯ ವ್ಯವಸ್ಥೆ ಮುಂತಾದ ಕಾರ್ಯಗಳ ಮೂಲಕ ಸಂಘವು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು. ಮುಖ್ಯಅತಿಥಿಗಳಾಗಿ ಆಗಮಿಸಿದ ದ.ಕ.ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಎಚ್.ಎನ್., ಪುತ್ತೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್,ಪುತ್ತೂರು ಎಪಿಎಂಸಿ ನಿಕಟಪೂರ್ವ ಸದಸ್ಯ ಮೇದಪ್ಪ ಗೌಡ ಡೆಪ್ಪುಣಿ, ಮರ್ದಾಳ ಗ್ರಾ.ಪಂ. ಅಧ್ಯಕ್ಷ ಹರೀಶ್ ಕೋಡಂದೂರು, ಐತ್ತೂರು ಗ್ರಾ.ಪಂ. ಅಧ್ಯಕ್ಷ ರೋಹಿತ್ ಶುಭಹಾರೈಸಿದರು.
ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸಂಘದ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಕಟ್ಟಡ ನಿರ್ಮಾಣದ ಗುತ್ತಿಗೆದಾರ ಗುರುಪ್ರಸಾದ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಗಣೇಶ್ ಮೂಜೂರು, ನಿರ್ದೇಶಕರಾದ ರಘುಚಂದ್ರ ಕೆ., ಗಿರೀಶ್ ಎ.ಪಿ., ಕೃಷ್ಣಪ್ಪ ಮಡಿವಾಳ, ಹರಿಶ್ಚಂದ್ರ ಪಿ., ಉಮೇಶ್ ಗೌಡ ಬಿ., ಸದಾನಂದ ಪಿ., ಸತೀಶ್ ನಾÊಕ್ ಮೇಲಿನಮನೆ, ಬಾಬು ಮುಗೇರ, ಚಂದ್ರಾವತಿ, ಯಶೋದಾ ಬಿ.ಪಿ., ಎಸ್ಸಿಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ಪ್ರದೀಪ್ ಕೆ. ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ ಅವರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಜಿ. ವಂದಿಸಿದರು.