ಸುಳ್ಯ : ಆರು ಬಾರಿ ಶಾಸಕರಾಗಿರುವ ಸಚಿವ ಎಸ್.ಅಂಗಾರ ಪ್ರತಿನಿಧಿಸುತ್ತಿರುವ ಸುಳ್ಯ ತಾಲೂಕಿನ ಅರಂತೋಡು ಗ್ರಾಮದಲ್ಲಿ ಹೊಳೆ ದಾಟಲು ಸೇತುವೆ ಇಲ್ಲದ ಹಿನ್ನೆಲೆಯಲ್ಲಿ ಅರಮನೆಗಯ ಪ್ರದೇಶದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸಲು ಏ. 11 ರಂದು ನಿರ್ಧರಿಸಿದ್ದಾರೆ.
ಅರಮನೆಗಯ ಅನ್ನುವ ಪ್ರದೇಶ ಅಂಗಾರ ಅವರ ಕ್ಷೇತ್ರವಾಗಿದ್ದು, ಈ ಊರಿನಲ್ಲೇ ನಡುವೆ ಹರಿಯುವ ಹೊಳೆಗೆ ಸೇತುವೆ ಇಲ್ಲ. ಅಲ್ಲೊಂದು ಸೇತುವೆ ಆಗಬೇಕೆಂದು ಪರಿಸರದ ನಿವಾಸಿಗಳು 30 ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತ ಬಂದಿದ್ದಾರೆ.
![](https://newsputtur.com/wp-content/uploads/2023/04/wooden-bridge.jpg)
ಹೊಳೆ ದಾಟಲು ಇರುವ ಏಕೈಕ ಮಾರ್ಗವಾಗಿರುವ ಮರದ ಸೇತುವೆ ಮಳೆಗಾಲದಲ್ಲಿ ಆಗಾಗ ಹಾನಿಗೊಳಗಾಗುತ್ತದೆ. ಇದರಿಂದ ಗ್ರಾಮಸ್ಥರು ಐದು ಕಿಲೋಮೀಟರ್ ದೂರದಲ್ಲಿರುವ ಪಟ್ಟಣಕ್ಕೆ ಬರಲು ಪರ್ಯಾಯ ಮಾರ್ಗದಲ್ಲಿ ಹೋಗಬೇಕಾದ ಅನಿವಾರ್ಯತೆ ಇದೆ. ಈ ಪರ್ಯಾಯ ಮಾರ್ಗವು 15 ಕಿಲೋಮೀಟರ್ಗೆ ವಿಸ್ತರಿಸುವುದರಿಂದ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಇನ್ನು ಅಸ್ತಿತ್ವದಲ್ಲಿರುವ ಮರದ ಸೇತುವೆಯ ಸುರಕ್ಷತೆಯ ಬಗ್ಗೆ ಚಿಕ್ಕ ಮಕ್ಕಳ ಪೋಷಕರು ವಿಶೇಷವಾಗಿ ಕಾಳಜಿ ವಹಿಸುತ್ತಾರೆ. ಸೇತುವೆಯ ಕೊರತೆಯಿಂದಾಗಿ ಈ ಭಾಗದಲ್ಲಿ ಅಗತ್ಯ ಮೂಲಸೌಕರ್ಯ ನಿರ್ಮಾಣಕ್ಕೂ ಅಡ್ಡಿಯಾಗಿದ್ದು, ಗ್ರಾಮಸ್ಥರ ಸ್ಥಿತಿ ಹೇಳ ತೀರದಂತಿದೆ.
![](https://newsputtur.com/wp-content/uploads/2023/04/wooden-bridge2.jpg)
ಸೇತುವೆಗಾಗಿ ಒತ್ತಾಯಿಸಿ ಹಲವಾರು ವರ್ಷಗಳಿಂದ ಮನವಿಗಳನ್ನು ಸಲ್ಲಿಸುತ್ತಿದ್ದರೂ ರಾಜಕೀಯ ಪ್ರತಿನಿಧಿಗಳು ಬೇಡಿಕೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಅರಮನೆಗಯ ಸೇತುವೆ ಬೇಡಿಕೆ ಇಡೇರುವ ತನಕ ಮತದಾನ ಬಹಿಷ್ಕರಿಸುವುದಾಗಿ ಹೇಳಿ ಮನೆ ಮನೆಗಳಲ್ಲಿ ಬ್ಯಾನರ್, ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ.
ಇನ್ನು ಗ್ರಾಮದಲ್ಲಿ ಮೂಲ ಸೌಕರ್ಯಗಳಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದ್ದು, ಬಹಿಷ್ಕಾರದಿಂದ ತಮ್ಮ ಸಂಕಷ್ಟದ ಬಗ್ಗೆ ಗಮನ ಹರಿಸಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂಬುದು ನಿವಾಸಿಗಳ ಆಶಯವಾಗಿದೆ.
![](https://newsputtur.com/wp-content/uploads/2023/04/boycott-mural-in-homes.jpg)