ಪುತ್ತೂರು: ಭಾರತ ಸಂಸ್ಕೃತಿಯಲ್ಲಿ ನಮ್ಮದೇ ಆದ ವೇಳಾಪಟ್ಟಿ ಇದೆ, ಅದುವೇ ಪಂಚಾಂಗ. ಚೈತ್ರ ಮಾಸದ ನವಮಿಯಂದು ರಾಮ ಹುಟ್ಟಿದ್ದರಿಂದ ಆ ದಿನ ರಾಮನವಮಿಯನ್ನು ಆಚರಣೆ ಮಾಡುತ್ತೇವೆ ಎಂದು ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜ ಶಂಕರ ಸೋಮಯಾಜಿ ಹೇಳಿದರು.
ಅವರು ನಗರದ ಬಪ್ಪಳಿಗೆಯ ಅಂಬಿಕಾ ಸಿಬಿಎಸ್ ಇ ವಿದ್ಯಾಲಯದಲ್ಲಿ ರಾಮನವಮಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಾವು ಯೋಚಿಸುವಾಗ ಕೆಟ್ಟದರಲ್ಲೂ ಏನು ಒಳ್ಳೆಯದಿದೆ ಎಂಬುವುದನ್ನು ಯೋಚಿಸಬೇಕು. ಅಂತೆಯೇ ಜೀವನದಲ್ಲಿ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಪರೀಕ್ಷೆ ಎಂಬುದು ಮುಖ್ಯ. ಅಂತಹ ಪರೀಕ್ಷೆಗಳನ್ನು ಎದುರಿಸಿದ ದಿವ್ಯ ಪುರುಷ ಶ್ರೀರಾಮ ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಮಾತಿನಲ್ಲಿ ಹೇಳುವುದು ಸುಲಭ. ಆದರೆ ಅದನ್ನು ಆಚರಣೆಗೆ ತರುವುದು ಕಮ್ಮಿ. ತಂದೆಯ ವಾಕ್ಯವನ್ನು ಪರಿಪಾಲನೆ ಮಾಡಿದವನು ಶ್ರೀರಾಮ. ಹಾಗಾಗಿ ಆತ ಮರ್ಯಾದ ಪುರುಷೋತ್ತಮ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ರಾಮ ಸಂಕೀರ್ತನೆ ನೆರವೇರಿತು. ಶಿಕ್ಷಕಿ ಶ್ರುತಿ ಸ್ವಾಗತಿಸಿ, ವಂದಿಸಿದರು.
























