ಪುತ್ತೂರು: ಕಡಬ ತಾಲೂಕಿನ ಕೃಷಿ ಕುಟುಂಬದ ನಾಟಿವೈದ್ಯ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಕಳುವಾಜೆ ಜಿನ್ನಪ್ಪ ಗೌಡರು ಇಂದು ಕಾಯ ತ್ಯಜಿಸಿದರು. ಎರಡು ದಿನಗಳ ಹಿಂದೆ ಮೆದುಳಿನ ವೈಫಲ್ಯ ಅವರನ್ನು ಬಾಧಿಸಿತ್ತು.
ಕಳುವಾಜೆ ಮನೆತನದ ಪ್ರಸಿದ್ಧ ನಾಟಿ ವೈದ್ಯರಾಗಿದ್ದ ದಿ. ಸೋಮಪ್ಪ – ಬಾಲಕ್ಕ ದಂಪತಿಗಳ ಹಿರಿಯ ಮಗನಾಗಿ 1943ರ ಜನವರಿ 20ರಂದು ಜನಿಸಿದ ಕಳುವಾಜೆ ಜಿನ್ನಪ್ಪ ಗೌಡರಿಗೆ 82 ವರ್ಷ ವಯಸ್ಸಾಗಿತ್ತು. ಪತ್ನಿ ಶ್ರೀಮತಿ ಜಾನಕಿ ಬಂಡಾಜೆಯವರೊಂದಿಗಿನ ದಾಂಪತ್ಯದಲ್ಲಿ ಯಮುನಾ, ಜಯಂತಿ, ಭಾಸ್ಕರ ಮತ್ತು ಯಶವಂತ ಎಂಬ ನಾಲ್ಕು ಮಕ್ಕಳನ್ನು ಪಡೆದಿದ್ದರು.
ತಮ್ಮ ಪೋಷಕರ 7 ಜನ ಮಕ್ಕಳಲ್ಲಿ ಹಿರಿಯವರಾಗಿದ್ದ ಜಿನ್ನಪ್ಪರ ಬೆನ್ನಿಗೆ ರಾಧಮ್ಮ, ಕುಶಾಲಪ್ಪ, ಸುಂದರ, ಅಚ್ಚುತ, ವೆಂಕಟ್ರಮಣ ಮತ್ತು
ಯಶೋದಾ ಎಂಬ ನಾಲ್ಕು ಸಹೋದರರು ಮತ್ತು ಈರ್ವರು ಸಹೋದರಿಯರು ಇದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿದ್ದ ಜಿನ್ನಪ್ಪರು ಅದರಲ್ಲಿ ದಂಡ ಪ್ರಮುಖ್ ಆಗಿ ಸೇವೆ ಸಲ್ಲಿಸಿದ್ದರು.
ಜೈಲುವಾಸ
ಭಾರತದ ಚರಿತ್ರೆಯಲ್ಲಿ ಪ್ರಮುಖವಾಗಿ ದಾಖಲಾಗಿರುವ ‘ತುರ್ತು ಪರಿಸ್ಥಿತಿ’ಯ ಸಂದರ್ಭದಲ್ಲಿ ಜೈಲುವಾಸವನ್ನು ಅನುಭವಿಸಿದ್ದರು
ನಾಟಿ ವೈದ್ಯರು
ತಂದೆಯಿಂದ ಬಳುವಳಿಯಾಗಿ ಬಂದಿದ್ದ ನಾಟಿ ವೈದ್ಯ ವಿದ್ಯೆಯನ್ನು ಸಮರ್ಥವಾಗಿ ಬಳಸಿಕೊಂಡು ಜನ – ಜಾನುವಾರುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಾ ಜನಾನುರಾಗಿಯಾಗಿದ್ದರು.
ಜನ ಪ್ರತಿನಿಧಿ
ಗೌಡರು ಗ್ರಾ. ಪ. ಸದಸ್ಯರಾಗಿದ್ದ ಸಂದರ್ಭದಲ್ಲಿ ‘ಕೂಲಿಗಾಗಿ ಕಾಳು’ ಯೋಜನೆಯಡಿಯಲ್ಲಿ ಸ್ವಗ್ರಾಮಕ್ಕೆ ವಿವಿಧ ಕಡೆಗಳಲ್ಲಿ ರಸ್ತೆ ಸಂಪರ್ಕ ಕಲ್ಪಿಸುವಲ್ಲಿ ಶ್ರಮಿಸಿ ಯಶಸ್ವಿಯಾಗಿದ್ದರು.
ಚುನಾವಣಾ ಅನುಭವ
ಜನಸಂಘದ ಕಾಲದಲ್ಲಿಯೇ ಅವರು ಕಾಣಿಯೂರು ಮಠದ ಶ್ರೀನಿವಾಸ್ ಆಚಾರ್ ಅವರ ವಿರುದ್ಧ ತಾಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧಿಸಿ ಪರಾಜಿತರಾಗಿದ್ದರು.
ಶಿಕ್ಷಣ ಪ್ರೇಮಿ
ಬೆಳಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣ ಸಮಿತಿಯ ಅಧ್ಯಕ್ಷರಾಗಿದ್ದಾಗ ಆ ಶಾಲೆಗೆ 4.50 ಎಕ್ರೆ ಭೂಮಿಯನ್ನು ಕೊಡಿಸಿದ್ದರು. ಅಂತೆಯೇ ನಾರ್ಯಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಮಂಡಳಿ ಮತ್ತು ನಿರ್ವಹಣ ಸಮಿತಿಯ ಅಧ್ಯಕ್ಷರಾಗಿದ್ದಾಗ ಅಲ್ಲಿಗೂ ಸಹ 4.50 ಎಕ್ರೆ ಭೂಮಿಯನ್ನು ಗಳಿಸಿಕೊಟ್ಟಿದ್ದರು.
ಇಂದು ಅಂತ್ಯ ಸಂಸ್ಕಾರ
ಇಂದು, ಮೇ 21ರಂದು, ಮೃತರ ಸ್ವಗೃಹದಲ್ಲಿ ಅಪರಾಹ್ನದ ವೇಳೆ ಅವರ ದೇಹದ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಅವರ ಸಹೋದರ ವೆಂಕಟ್ರಮಣ ಗೌಡರು ಮಾಹಿತಿ ನೀಡಿದ್ದಾರೆ.