ತಾಯಿಯ ಜೊತೆ ನಿದ್ದೆ ಮಾತ್ರೆ ಸೇವಿಸಿದ್ದ ರಾಜ್ಯಮಟ್ಟದ ಕಲಾವಿದ
ಬೆಳ್ತಂಗಡಿ : ತಾಯಿಯ ಜೊತೆಗೆ ನಿದ್ದೆ ಮಾತ್ರೆ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಬೆಳ್ತಂಗಡಿಯ ಮುಂಡಾಜೆ ಗ್ರಾಮದ ಕೂಳೂರು ನಿವಾಸಿ, ಚಿತ್ರ ಕಲಾ ಶಿಕ್ಷಕ, ರಾಜ್ಯಮಟ್ಟದ ಕಲಾವಿದ ಜಯರಾಮ್ ಕೆ (58) ಶುಕ್ರವಾರ ರಾತ್ರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಕೊನೆಯುಸಿರೆಳೆದಿದ್ದಾರೆ.
ಆರ್ಥಿಕ ಸಮಸ್ಯೆ ಮತ್ತು ಅನಾರೋಗ್ಯದ ಕಾರಣದಿಂದ ಮೇ 10ರಂದು ಹಿಂದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಪತ್ರ ಬರೆದಿಟ್ಟು ತಾಯಿಯ ಒಡಗೂಡಿ ಅಪರಿಮಿತ ನಿದ್ದೆ ಮಾತ್ರೆ ಸೇವಿಸಿದ್ದರು. ಅವರ ತಾಯಿ ಕಲ್ಯಾಣಿ ನಾಲ್ಕು ದಿನಗಳ ಹಿಂದೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಜಯರಾಂ ಕೆ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಅವರಿಗೆ ಕಳೆದ ಮೂರು ದಿನಗಳಿಂದ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು.
ಮೇ 10 ರಂದು ಬೆಳಗ್ಗೆ ಜಯರಾಂ ಅವರ ಮನೆಯ ಬಳಿಯಿಂದ ಯಾವುದೇ ಶಬ್ದ ಕೇಳದೆ ಇದ್ದುದರಿಂದ ನೆರೆಹೊರೆಯವರು ಬಂದು ನೋಡಿದಾಗ ತಾಯಿ ಮತ್ತು ಮಗ ಮನೆಯೊಳಗೆ ದೇವರ ಕೋಣೆಯ ಎದುರು ಜೊತೆಯಾಗಿ ಮಲಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಊರವರು ಹಾಗೂ ಅಣ್ಣನ ಮಕ್ಕಳ ಸಹಕಾರದೊಂದಿಗೆ ಮನೆಯ ಬಾಗಿಲು ತೆಗೆದು ಒಳ ಪ್ರವೇಶಿಸಿದಾಗ ಇಬ್ಬರೂ ಉಸಿರಾಡುತ್ತಿದ್ದರು. ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಯಿತು. ಮೂರು ದಿನಗಳವರೆಗೂ ತೀವ್ರ ನಿಗಾ ಘಟಕದಲ್ಲಿದ್ದ ಅವರ ಪೈಕಿ ತಾಯಿ ಕಲ್ಯಾಣಿ ಅವರು ಮೇ 12 ರಂದು ಕೊನೆಯುಸಿರೆಳೆದಿದ್ದರು.
ಜಯರಾಂ ಕೆ ಅವರು ಕಲಾವಿದರಾಗಿ, ನಾಟಕ ರಚನೆಕಾರರಾಗಿ, ಜಾನಪದ ಕಲಾರಾಧಕರಾಗಿ, ಚಿತ್ರಕಲಾ ಶಿಕ್ಷಕರಾಗಿ, ಕುಣಿತ ಭಜನಾ ತರಬೇತುದಾರರಾಗಿ, ಷಟ್ಲ್ ಬ್ಯಾಡ್ಮಿಂಟನ್ ಆಟಗಾರನಾಗಿ ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ಯುವಜನ ಮೇಳದ ಏಕಪಾತ್ರಾಭಿನಯದಲ್ಲಿ ರಾಜ್ಯಮಟ್ಟದವರೆಗಿನ ಪ್ರಶಸ್ತಿ ಪಡೆದುಕೊಂಡಿದ್ದರು. ಸ್ಥಳೀಯ ಹಲವು ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ವಿಶ್ವ ತುಳು ಸಮ್ಮೇಳನದ ಸಾಂಸ್ಕೃತಿಕ ಸಮಿತಿಯಲ್ಲಿ ಪದಾಧಿಕಾರಿಯಾಗಿದ್ದು ಉತ್ತಮ ಸೇವೆ ನೀಡಿದ್ದರು.
ತುಳುನಾಡ ಸಂಸ್ಕೃತಿ, ನಾಟಿ ಔಷಧಿ, ಜನಜಾಗೃತಿ ವಿಚಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಪ್ರಸಿದ್ಧರಾಗಿದ್ದ ಅವರು ಕಳೆದ 26 ವರ್ಷಗಳಿಂದ ಮುಂಡಾಜೆಯಲ್ಲಿ ಕಲಾಕುಂಚ ಆರ್ಟ್ಸ್ ಎಂಬ ಟ್ಯೂಷನ್ ಸೆಂಟರ್ ನಡೆಸುತ್ತಿದ್ದರು. ಐದನೇ ತರಗತಿ ಅನುತ್ತೀರ್ಣರಾದವರೂ ಸೇರಿದಂತೆ ವಿವಿಧ ಕಾರಣಗಳಿಂದ ಎಸ್ಸೆಸ್ಸೆಲ್ಸಿ ಪೂರ್ತಿ ಮಾಡಲಾಗದವರನ್ನು ಅವರು ತರಬೇತಿ ನೀಡಿ ಪರೀಕ್ಷೆಗೆ ಸಿದ್ಧಗೊಳಿಸಿ ಪಾಸ್ ಮಾಡಿಸುತ್ತಿದ್ದರು. ಅವರ ಕಲಾ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯೊಬ್ಬರೂ ಡಾಕ್ಟರೇಟ್ ಪದವಿ ಪಡೆದಿರುವುದೂ ಇದೆ. ಮೃತರು ಪತ್ಮಿ ಅಮೂಲ್ಯ, ಅಣ್ಣ ಶಶಿಧರ ನಾಯರ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.