ವಿಧಾನಸಭಾ ಚುನಾವಣೆ: ಮತ ಹಾಕುವಂತೆ ಸೀರೆಗಳ ಉಡುಗೊರೆ

ಸೀರೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಜನತೆ

ಚಿಕ್ಕಮಗಳೂರು: ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಉಡುಗೊರೆಯಾಗಿ ನೀಡಿದ್ದ ಸೀರೆಗಳನ್ನು ಸುಟ್ಟು ಹಾಕಿರುವ ಘಟನೆ ಚಿಕ್ಕಮಗಳೂರಿನ ಭಕ್ತರಹಳ್ಳಿ ಮತ್ತು ಮಲ್ಲೇನಹಳ್ಳಿ ಗ್ರಾಮದಲ್ಲಿ ಮಾ.7 ಮಂಗಳವಾರ ನಡೆದಿದೆ. ಸೀರೆ ಹಂಚುತ್ತಿದ್ದ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಈ ಘಟನೆ ನಡೆದಿದೆ.

ಕಳೆದ ಐದು ವರ್ಷಗಳಿಂದ ತಮ್ಮ ಸಮಸ್ಯೆಗಳಿಗೆ ಕಿವಿಕೊಡದೆ ಕಣ್ಣು ಮುಚ್ಚಿ ಕುಳಿತು, ಚುನಾವಣೆ ಬಂದ ಕೂಡಲೇ ಉಡುಗೊರೆ ನೀಡಲು ಮುಂದಾದ ಜನಪ್ರತಿನಿಧಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸೀರೆಗಳಿಗೆ ಬೆಂಕಿ ಹಚ್ಚಿದ ಯುವಕ, ಸ್ಥಳೀಯ ಶಾಸಕರು ತಮ್ಮ ಕ್ಷೇತ್ರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ತಲೆಕೆಡಿಸಿಕೊಳ್ಳದೆ ಈಗ ಉಡುಗೊರೆಗಳನ್ನು ನೀಡಿ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು.





























 
 

ಗ್ರಾಮದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ನಮ್ಮ ಕುಂದುಕೊರತೆಗಳನ್ನು ನಿವಾರಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ಈಗ ಸೀರೆ ಹಂಚುವ ಮೂಲಕ ನಮ್ಮ ಮಹಿಳೆಯರಿಗೆ ಅವಮಾನ ಮಾಡುತ್ತಿದ್ದಾರೆ. ಸಾಂಕ್ರಾಮಿಕ ರೋಗ ಸಮಯದಲ್ಲಿ ನಮಗೆ ಆಹಾರದ ಅಗತ್ಯವಿತ್ತು. ಅಂದು ಒಂದು ಕೆಜಿ ಅಕ್ಕಿ ಕೂಡ ವ್ಯವಸ್ಥೆ ಮಾಡಲಾಗದವರು ಈಗ ಮತ ಭಿಕ್ಷೆಗೆ ಬಂದಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿತನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೀರೆ ಕೊಳ್ಳಲಾಗದಷ್ಟು ಬಡವರಲ್ಲ ನಾವು. 100 ರೂ.ಗಿಂತ ಕಡಿಮೆ ಬೆಲೆಯ ಸೀರೆಗೆ ನಮ್ಮ ಮತವನ್ನು ಮಾರಬಹುದೇ? ಎಂದು ಗ್ರಾಮಸ್ಥರೊಬ್ಬರು ಪ್ರಶ್ನಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top