ಹಿಂದುಗಳನ್ನು ದಮನಿಸುವ ಷಡ್ಯಂತ್ರ ಎಂದು ಆರೋಪ
ಮಂಗಳೂರು : ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಮಂಗಳೂರಿಗೆ ಶನಿವಾರ ಭೇಟಿ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೋಮು ಹಿಂಸಾಚಾರ ನಿಗ್ರಹಕ್ಕೆ ಆ್ಯಂಟಿ ಕಮ್ಯೂನಲ್ ಟಾಸ್ಕ್ಫೋರ್ಸ್ ಸ್ಥಾಪನೆಯ ಘೋಷಣೆ ಮಾಡಿರುವುದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಹಿಂದುಗಳನ್ನು ದಮನಿಸಲು, ಆ ಮೂಲಕ ತನ್ನ ವೋಟ್ಬ್ಯಾಂಕ್ ಪರವಾಗಿರುವವರನ್ನು ಖುಷಿಪಡಿಸಲು ಕಾಂಗ್ರೆಸ್ ಸರಕಾರ ಕೈಗೊಂಡಿರುವ ಕ್ರಮ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಸಂಸದ ಕ್ಯಾ.ಬ್ರಿಜೇಶ್ ಚೌಟ, ಸ್ಥಳೀಯ ಜನಪ್ರತಿನಿಧಿಗಳ ಜತೆಗೆ ಯಾವುದೇ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ಆ್ಯಂಟಿ ಕಮ್ಯೂನಲ್ ಟಾಸ್ಕ್ಫೊರ್ಸ್ ಸ್ಥಾಪನೆಯ ಘೋಷಣೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಆದರೆ ಇಂಥಹ ಸೂಕ್ಷ್ಮ ವಿಚಾರದ ಬಗ್ಗೆ ಗೃಹ ಸಚಿವರು ಇಲ್ಲಿನ ಜನಪ್ರತಿನಿಧಿಗಳೊಂದಿಗೆ ಚರ್ಚಿಸುವುದಾಗಲಿ ಅಥವಾ ಪರಿಸ್ಥಿತಿ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯುವ ಪ್ರಯತ್ನವನ್ನಾಗಲಿ ಮಾಡಿಲ್ಲ.
ಪೊಲೀಸರ ಜತೆ ಕಾನೂನು ಸುವ್ಯವಸ್ಥೆ ಸಭೆ ನಡೆಸಿ ಅವರ ಅಭಿಪ್ರಾಯವನ್ನು ಪಡೆಯುವ ಪ್ರಯತ್ನವನ್ನೂ ಮಾಡಿಲ್ಲ. ಪೊಲೀಸರ ಜತೆ ಕಾನೂನು ಸುವ್ಯವಸ್ಥೆ ಸಭೆ ನಡೆಸಿರುವ ಗೃಹ ಸಚಿವರು ಅದಕ್ಕೂ ಮುನ್ನ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಲು ಉತ್ಸಾಹ ತೋರಿದ್ದಾರೆ. ಈ ವಿಚಾರದಲ್ಲಿ ಸಚಿವರು ಜನಪ್ರತಿನಿಧಿಗಳನ್ನು ಕಡೆಗಣಿಸಿ ಏಕಪಕ್ಷೀಯ ತೀರ್ಮಾನ ಕೈಗೊಂಡಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಆ ಮೂಲಕ, ಗೃಹ ಸಚಿವರು ಈ ಪ್ರದೇಶದ ಸಂವೇದನಾಶೀಲತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದು ಸ್ಥಳೀಯ ಜನರ ಭಾವನೆಗಳನ್ನು ಮತ್ತು ವಾಸ್ತವಿಕ ಪರಿಸ್ಥಿತಿಯನ್ನು ಕಡೆಗಣಿಸಿದಂತೆಯೇ ಸರಿ ಎಂದು ಚೌಟ ಆರೋಪಿಸಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಮೊದಲು ವೈಯಕ್ತಿಕ ದ್ವೇಷ ಮತ್ತು ಗ್ಯಾಂಗ್ವಾರ್ ಎಂದು ಬಿಂಬಿಸಿದ್ದ ಕಾಂಗ್ರೆಸ್ ಸರಕಾರ , ಪ್ರಕರಣದ ಸತ್ಯಾಂಶ ಹೊರಬಂದ ಬಳಿಕ ಅದಕ್ಕೆ ಕೋಮುಬಣ್ಣ ಕಟ್ಟುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈಗ ಅವರ ನಿಲುವು ಹೇಗೆ ಬದಲಾಗಿದ್ದು? ಈಗಲಾದರೂ ಈ ಕಾಂಗ್ರೆಸ್ ಸರಕಾರ ಸುಹಾಸ್ ಹಿಂದೂ ಆಗಿರುವುದಕ್ಕೆ ಹತ್ಯೆಯಾಗಿದೆ ಎಂದು ಬಹಿರಂಗವಾಗಿ ಹೇಳುವ ಧೈರ್ಯ ತೋರುತ್ತದೆಯೇ? ಇಂಥಹ ಗಂಭೀರ ಹಾಗೂ ಸೂಕ್ಷ್ಮ ಪ್ರಕರಣಗಳಲ್ಲಿಯೂ ಕೇವಲ ಒಂದು ಸಮುದಾಯವನ್ನಷ್ಟೇ ಓಲೈಸುವ ಈ ಸಿದ್ದರಾಮಯ್ಯ ಸರಕಾರದ ನಿಜವಾದ ಅಜೆಂಡಾ ಏನು? ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಕರಾವಳಿಯನ್ನು ಕೋಮು ಗಲಭೆ ಪೀಡಿತ ಎಂದು ಹಣೆಪಟ್ಟಿ ಕಟ್ಟಿ ನೈಜ ಪರಿಸ್ಥಿತಿಯನ್ನು ಎದುರಿಸುವ ಬದಲು, ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಆಪಾದಿಸಿದ್ದಾರೆ. ಗೃಹ ಸಚಿವ ಪರಮೇಶ್ವರ್ ಅವರು ಘೋಷಿಸಿದ ‘ಕೋಮು ವಿರೋಧಿ ಕಾರ್ಯಪಡೆ’ಯು ಕಾಂಗ್ರೆಸ್ನ ಹಿರಿಯ ನಾಯಕಿ ಸೋನಿಯಾ ಗಾಂಧಿಯವರು ಪ್ರಸ್ತಾಪಿಸಿದ್ದ ವಿವಾದಾತ್ಮಕ ಕೋಮು ಹಿಂಸಾಚಾರ ಕರಡು ಮಸೂದೆಯಿಂದ ಪ್ರೇರಣೆ ಪಡೆದಂತಿದೆ ಎಂದು ಟೀಕಿಸಿದ್ದಾರೆ.