ಹಣಕಾಸಿನ ನೆರವು ಒದಗಿಸುವುದಿಲ್ಲ ಎಂದು ಉತ್ತರಿಸಿದ ಸರಕಾರ
ಬೆಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿಸ್ತರಿಸಬೇಕೆಂದು ಶಾಸಕ ಅಶೋಕ್ ಕುಮಾರ್ ರೈ ಅಧಿವೇಶನದಲ್ಲಿ ಒತ್ತಾಯಿಸಿದ್ದಾರೆ. ಇದಕ್ಕೆ ಉತ್ತರಿಸಿದ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್, ವಿಸ್ತರಣೆ ವೆಚ್ಚವನ್ನು ರಾಜ್ಯ ಸರಕಾರ ಭರಿಸಲಾಗುವುದಿಲ್ಲ ಎಂಬ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈ ಅವರ ಗಮನ ಸೆಳೆಯುವ ಸೂಚನೆಗೆ ಸಚಿವ ಎಂಬಿ. ಪಾಟೀಲ್ ಉತ್ತರ ನೀಡಿದರು. ಕೇಂದ್ರ ನಾಗರಿಕ ವಿಮಾನ ಯಾನ ಇಲಾಖೆ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ಹೊಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಿದೆ. ಅದರಿಂದಾಗಿ ಆ ಸಂಸ್ಥೆಯೇ ಭೂಸ್ವಾಧೀನ ಮಾಡಿಕೊಂಡು, ರನ್ವೇ ನಿರ್ಮಿಸಬೇಕು. ಬೇಕಾದರೆ ರಾಜ್ಯ ಸರಕಾರ ಆರ್ಥಿಕ ನೆರವು ಹೊರತುಪಡಿಸಿ ಉಳಿದ ನೆರವು ನೀಡಲಿದೆ ಎಂದು ಹೇಳಿದರು.
ರಾಜ್ಯವು ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುತ್ತಿದ್ದರೂ, ಅವುಗಳನ್ನು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಗೆ ಹಸ್ತಾಂತರಿಸ ಬೇಕಾಗಿರುವುದರಿಂದ, ಕೇಂದ್ರದ ವಿಮಾನ ನಿಲ್ದಾಣಗಳ ಹಣಗಳಿಸುವ ಯೋಜನೆಯ ವಿರುದ್ಧ ರಾಜ್ಯ ಪ್ರತಿಭಟಿಸುತ್ತಿದೆ ಎಂದು ತಿಳಿಸಿದರು.
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ವಿಮಾನ ನಿಲ್ದಾಣವನ್ನು ಖಾಸಗಿ ಸಂಸ್ಥೆಗೆ ನಿರ್ವಹಣೆಗೆ ಮಾತ್ರ ನೀಡಲಾಗಿದೆ. ಹೀಗಾಗಿ ರಾಜ್ಯ ಸರಕಾರವೂ ರನ್ವೇ ನಿರ್ಮಿಸಬಹುದು. ಇಲ್ಲವಾದರೆ ಅಗತ್ಯ ಭೂಮಿ ಒದಗಿಸಬೇಕು. ಇದು ನೂರಾರು ಜನರ ಜೀವನದ ಪ್ರಶ್ನೆ. ಹೀಗಾಗಿ ರಾಜ್ಯ ಸರಕಾರ ನಿಲುವು ಬದಲು ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.