ಪುತ್ತೂರು: ವೈದ್ಯರೊಬ್ಬರ ಎಡವಟ್ಟಿನಿಂದ ಹೆರಿಗೆಯಾದ ಬಳಿಕ ನಡೆಸಿದ ಶಸ್ತ್ರ ಚಿಕಿತ್ಸೆಯಲ್ಲಿ ಬಟ್ಟೆ ಮಹಿಳೆಯ ಹೊಟ್ಟೆಯೊಳಗೆ ಉಳಿದು ಬಾಣಂತಿಯೊಬ್ಬರು ಸುಮಾರು ಮೂರು ತಿಂಗಳು ನರಕಯಾತನೆ ಅನುಭವಿಸಿದ್ದು, ಈ ಕುರಿತು ಪುತ್ತೂರು ನಗರ ಠಾಣೆಗೆ ಪುತ್ತೂರಿನ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಭಾನುವಾರ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ಬಾಣಂತಿಯ ಪತಿ ಗಗನ್ ದೀಪ್ ತಿಳಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹೆರಿಗೆಯ ಸಂದರ್ಭ ನಗರದ ಆಸ್ಪತ್ರೆಯೊಂದರ ವೈದ್ಯರ ನಿರ್ಲಕ್ಷತೆಯಿಂದ ಬಟ್ಟೆ ಹೊಟ್ಟೆಯಲ್ಲೇ ಉಳಿದು, ಅದನ್ನು ತಿಳಿದ ಬಳಿಕವೂ ತೆರವು ಮಾಡದೆ ನಿರ್ಲ್ಯಕ್ಷ ತೋರಿದ್ದಾರೆ. ಪರಿಣಾಮ ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯವನ್ನು ದೇಹದ ವಿವಿಧ ಭಾಗಕ್ಕೆ ಹೋದ ಕಾರಣದಿಂದ ಪತ್ನಿಯ ಪರಿಸ್ಥಿತಿ ಗಂಭೀರ ಸ್ಥಿತಿಗೆ ತಲುಪಿತ್ತು. ಮೂರು ತಿಂಗಳಿಂದ ಮಾನಸಿಕ ಯಾನೆಯಲ್ಲಿ ದಿನಕಳೆಯುವ ಸ್ಥಿತಿ ನಿರ್ಮಾಣವಾಗಿದ್ದು, ಮುಂದೆ ಇಂತಹ ಸ್ಥಿತಿ ಯಾರಿಗೂ ಬರಬಾರದು. ಸಂಬಂಧಪಟ್ಟವರು ಈಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಸಮಸ್ಯೆಗೊಳಗಾದ ೩೩ ವರ್ಷ ಪ್ರಾಯದ ಶರಣ್ಯ ಲಕ್ಷ್ಮಿ ಬಿ ಅವರ ಪತಿ ಗಗನ್ ದೀಪ್ ಬಿ. ಆಗ್ರಹಿಸಿದ್ದಾರೆ.
ನ.೨೭ ರಂದು ಪುತ್ತೂರಿ ಆಸ್ಪತ್ರೆಯೊಂದರಲ್ಲಿ ತನ್ನ ಪತ್ನಿಗೆ ಸಿಸೇರಿಯನ್ ಮೂಲಕ ಹೆರಿಗೆಯಾಗಿದ್ದು, ಡಿ.೬ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದಾಗ ಬಳಿಕ ಮನೆಯಲ್ಲಿ ವಿಪರೀತ ಜ್ವರ ಬಂದಿದ್ದು, ಹೆರಿಗೆ ಮಾಡಿಸಿದ ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿದಾಗ ಜ್ವರದ ಔಷಧಿಯನ್ನು ಬಳಸುವಂತೆ ಸೂಚಿಸಿದ್ದಾರೆ. ಹೊಟ್ಟೆಯ ಎಡದ ಭಾಗದಲ್ಲಿ ಜಗ್ಗಿದ್ದು, ಬಲ ಭಾಗದಲ್ಲಿ ಕೈಗೆ ಏನೋ ಸಿಕ್ಕಿದ ಅನುಭವ ಪತ್ನಿಗೆ ಆಗುತ್ತಿತ್ತು. ಎರಡು ದಿನದಲ್ಲಿ ಜ್ವರ ಕಮ್ಮಿಯಾಗದ ಸಂದರ್ಭ ಮತ್ತೆ ವಿಚಾರಿಸಿದಾಗ ವೈದ್ಯರು ಹೆಮಟೋಮ್ ಆಗಿರಬಹುದೆಂದು ಹೇಳಿದ್ದಲ್ಲದೆ ಈ ಬಗ್ಗೆ ಹೆಚ್ಚಿನ ಚಿಂತೆ ಬೇಡ ಎಂದಿದ್ದರು. ಮತ್ತೆ ಮತ್ತೆ ಈ ಕುರಿತು ವೈದ್ಯರಲ್ಲಿ ಕೇಳಿದಾಗ ಆಲ್ಟ್ರಾ ಸೌಂಡ್ ಮಾಡಬಹುದೆಂದು ಹೇಳಿದ್ದಾರೆ. ಇದರಲ್ಲಿ ೧೦ ಸೆ.ಮೀ. ಮಾಪ್ ಪಾರ್ಮೇಶನ್ ಇರುವುದು ಕಂಡು ಬಂದಿದೆ. ಬೇರೆ ಔಷಧಿಯನ್ನು ನೀಡಿದ್ದು, ಜ್ವರ ಕಡಿಮೆಯಾಗಿದೆ ಎಂದು ತಿಳಿಸಿದರು.
ಕೆಲವು ದಿನದಲ್ಲಿ ಸಂಧಿ ನೋವು ಪ್ರಾರಂಭವಾಗಿದ್ದು, ಈ ಬಗ್ಗೆಯೂ ವೈದ್ಯರಲ್ಲಿ ವಿಚಾರಿಸಿದಾಗ ಆರ್ಥೋ ಇರಬಹುದೆಂಬ ಹೇಳಿದ್ದಾರೆ. ಕೆಲವು ದಿನ ಬಳಿಕ ಮಗುವನ್ನು ಹಾಸಿಗೆಯಿಂದ ಎತ್ತಲಾಗದ, ನಿಲ್ಲಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ತಿಳಿಸಿದಾಗ ರುಮೊಟೋಲೋಜಿ ತಜ್ಞರನ್ನು ಸಂಪರ್ಕಿಸುವುದು ಉತ್ತಮ ಎಂಬ ಸಲಹೆ ವೈದ್ಯರು ನೀಡಿದ್ದಾರೆ. ಮಂಗಳೂರಿನ ತಜ್ಞರು ವರದಿಗಳನ್ನು ಪರಿಶೀಲನೆ ನಡೆಸಿ ಸಿಸರೇಯಿನ್ ಮಾಡಿದ ವೈದ್ಯರಲ್ಲಿ ಮಾತನಾಡಿದ್ದಾರೆ. ಈ ಸಂದರ್ಭ ೧೦ ಸೆ.ಮೀ. ಮಾಸ್ ತೋರಿಸುತ್ತಿದ್ದರೂ ಯಾಕೆ ತೆರವು ಮಾಡಿಲ್ಲ ಎಂದು ಮಂಗಳೂರಿನ ತಜ್ಞ ವೈದ್ಯರು ಹೇಳಿದ್ದು, ಸಿಟಿಸಿ ಸ್ಕ್ಯಾನ್ ಮಾಡಿದಾಗ ಸರ್ಜಿಕಲ್ ಮಾಪ್ ಅನ್ನು ಸೂಚಿಸುವ ಗ್ಲಾಸಿಪಿಗೋಮಾ ಇದೆಯೆಂಬುದು ಬೆಳಕಿಗೆ ಬಂದಿದ್ದು, ಒಂದೂವರೆ ತಿಂಗಳು ಆಗಿರುವ ಕಾರಣ ಈಗಲೇ ಅಪಾಯದ ಸ್ಥಿತಿ ತಲುಪಿದೆ ಎಂದಿದ್ದರು. ದ್ವಿತೀಯ ಅಭಿಪ್ರಾಯ ಪಡೆದು ತಕ್ಷಣ ಅದನ್ನು ಹೊರ ತೆಗೆಯುವ ನಿಟ್ಟಿನಲ್ಲಿ ಶಸ್ತ್ರಶಿಕಿತ್ಸೆ ನಡೆಸಲಾಗಿದೆ ಎಂದು ತಿಳಿಸಿದರು.
ಆಪರೇಷನ್ ಮಾಡುವ ಸಂದರ್ಭ ಥಿಯೇಟರ್ ಒಳಗೆ ತೆಗೆದುಕೊಂಡು ಹೋದ ವಸ್ತುಗಳು ಹಾಗೂ ಕೊನೆಯಲ್ಲಿ ಉಳಿಕೆಯಾದ ವಸ್ತುಗಳನ್ನು ತಾಳೆ ಹಾಕಿ ಸರಿಯಿದೆ ಎಂದು ದೃಢೀಕರಿಸಬೇಕು. ಆ ಬಳಿಕ ಆಪರೇಷನ್ ಮಾಡಿದ ಜಾಗವನ್ನು ಮುಚ್ಚಬೇಕೆಂಬುದು ಮೇಡಿಕಲ್ ಬೋರ್ಡ್ ನಿಯಮವಿದೆ. ಒಟಿಯಲ್ಲಿ ಎಲ್ಲವೂ ಟ್ಯಾಲಿ ಇದೆ ಎಂದಾದರೆ, ಈಗ ಹೊಟ್ಟೆಯಲ್ಲಿ ದೊಡ್ಡದಾದ ಬಟ್ಟೆ ಬಾಕಿಯಾಗಿದ್ದು ಹೇಗೆ ಎಂಬುದನ್ನು ಪ್ರಶ್ನಿಸಿದಾಗ ಯಾರು ನಿರ್ಲಕ್ಷಿಸಿದ್ದಾರೆಂದು ತಿಳಿಯುತ್ತಿಲ್ಲ ಎಂದು ವೈದ್ಯರು ಜಾರಿಕೊಂಡಿದ್ದಾರೆ. ಈ ಕುರಿತು ಇಂಡಿಯನ್ ಮೆಡಿಕಲ್ ಬೋರ್ಡ್ ಹಾಗೂ ಕರ್ನಾಟಕ ಮೆಡಿಕಲ್ ಕೌನ್ಸಿಲ್ ನಲ್ಲೂ ದೂರು ದಾಖಲಿಸಲಾಗಿದೆ ಎಂದು ಗಗನ್ ದೀಪ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಬಂಧಿಕರಾದ ಶಿವಪ್ರಸಾದ್ ಸರಳಿ, ಆತ್ಮೀಯರಾದ ಶಿವಕುಮಾರ್ ಉಪಸ್ಥಿತರಿದ್ದರು.