ಬಾಲಿವುಡ್ ನಟಿಯನ್ನು ಪರಮೋಚ್ಚ ಪದವಿಯಿಂದ ಕಿತ್ತು ಹಾಕಿದ್ದು ಯಾಕೆ ಗೊತ್ತಾ?
ಪ್ರಯಾಗ್ರಾಜ್: ಬಾಲಿವುಡ್ನ ಒಂದು ಕಾಲದ ಗ್ಲಾಮರ್ ನಟಿ ಮಮತಾ ಕುಲಕರ್ಣಿ ಮಹಾಕುಂಭಮೇಳದಲ್ಲಿ ಕಿನ್ನರ ಅಖಾಡದ ಮಹಾಮಂಡಲೇಶ್ವರ ಆಗಿ ಪಟ್ಟಾಭಿಷಿಕ್ತರಾದ ಸುದ್ದಿ ಕಳೆದ ವಾರ ಭಾರಿ ವೈರಲ್ ಆಗಿತ್ತು. ಆದರೆ ಒಂದೇ ವಾರದಲ್ಲಿ ಈ ಪಟ್ಟದಿಂದ ಅವರನ್ನು ಕೆಳಗಿಳಿಸಲಾಗಿದೆ.
90ರ ದಶಕದಲ್ಲಿ ಬಾಲಿವುಡ್ನಲ್ಲಿ ಸಖತ್ ಮಿಂಚುತ್ತಿದ್ದ ಮಮತಾ ಕುಲಕರ್ಣಿ ಸೆಕ್ಸಿ ನಟಿ ಎಂದೇ ಅರಿಯಲ್ಪಡುತ್ತಿದ್ದರು. ಇಂಥ ನಟಿ ಏಕಾಏಕಿ ಸನ್ಯಾಸ ಸ್ವೀಕರಿಸಿದ್ದೂ ಅಲ್ಲದೆ ಪ್ರಮುಖ ಅಖಾಡವಾದ ಕಿನ್ನರ ಅಖಾಡದಿಂದ ಪರಮೋಚ್ಚ ಪದವಿಯಾದ ಮಹಾಮಂಡಲೇಶ್ವರ ಆಗಿ ಪಟ್ಟಾಭಿಷಿಕ್ತರಾದದ್ದು ಅನೇಕರ ಹುಬ್ಬೇರಿಸಿತ್ತು. ಬಾಬಾ ರಾಮ್ದೇವ್ ಸೇರಿದಂತೆ ಅನೇಕ ಸಾಧು ತರು ಈ ಆಯ್ಕೆ ಬಗ್ಗೆ ಅಪಸ್ವರ ಎತ್ತಿ ಮಹಾಮಂಡಲೇಶ್ವರದಂಥ ಉನ್ನತ ಧಾರ್ಮಿಕ ಹುದ್ದೆಗೆ ಅಪಚಾರವಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಈಗ ಕಿನ್ನರ ಅಖಾಡದ ಮಹಾಮಂಡಲೇಶ್ವರ ಪಟ್ಟದಿಂದ ಅವರನ್ನು ಕೆಳಗಿಳಿಸಲಾಗಿದೆ ಎಂಬ ಸುದ್ದಿ ಬಂದಿದೆ. ಕಿನ್ನರ ಅಖಾಡ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಂಡಿರುವ ತೃತೀಯ ಲಿಂಗಿಗಳ ಸಂಘವಾಗಿದೆ. ಇಷ್ಟು ತ್ರವಲ್ಲ ಕಿನ್ನರ ಅಖಾಡದ ಮಹಾಮಂಡಲೇಶ್ವರ ಪಟ್ಟ ಪಡೆಯಲು ಮಮತಾ ಕುಲಕರ್ಣಿ 10 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂಬ ಆರೋಪವೂ ಕೇಳಿಸುತ್ತಿದೆ. ಆದರೆ ಇದನ್ನು ಮಮತಾ ಕುಲಕರ್ಣಿ ಖಡಾಖಂಡಿತವಾಗಿ ನಿರಾಕರಿಸಿದ್ದಾರೆ.
ಮಹಾಮಂಡಲೇಶ್ವರ ಪಟ್ಟದಿಂದ ಕೆಳಗಿಳಿದ ಮರುದಿನವೇ ರಜತ್ ಶರ್ಮ ನಡೆಸಿಕೊಡುತ್ತಿರುವ ಆಪ್ ಕಿ ಅದಾಲತ್ ಟಾಕ್ಶೋನಲ್ಲಿ ಭಾಗವಹಿಸಿರುವ ಮಮತಾ ಕುಲಕರ್ಣಿ 10 ಕೋಟಿ ನೀಡಿದ ಆರೋಪವನ್ನು ಅಲ್ಲಗೆಳೆದಿದ್ದಾರೆ. ಕ್ರಿಮಿನಲ್ ಕೇಸ್ ಇರುವ ಕಾರಣ ನನ್ನ ಎಲ್ಲ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಖಾಡಕ್ಕೆ 2 ಲ.ರೂ. ಕಾಣಿಕೆ ರೂಪದಲ್ಲಿ ನೀಡಿದ್ದೇನೆ. ಈ ಹಣವನ್ನೂ ಬೇರೆಯವರಿಂದ ಸಾಲ ಪಡೆದಿದ್ದೇನೆ ಎಂದವರು ಹೇಳಿದ್ದಾರೆ. ಬಾಬಾ ರಾಮ್ದೇವ್ ಅವರಿಗೆ ಮಹಾಕಾಳ ಹಾಗೂ ಮಹಾಕಾಳಿ ಬಗ್ಗೆ ಭಯ ಇರಬೇಕು ಎಂದು ಲೇವಡಿ ಮಾಡಿದ್ದಾರೆ. ಒಂದೇ ದಿನದಲ್ಲಿ ಯಾರೂ ಸಂತತ್ವವನ್ನು ಸಾಧಿಸಲು ಸಾಧ್ಯವಿಲ್ಲ. ಇಂದಿನ ದಿನಗಳಲ್ಲಿ ಯಾರನ್ನಾದರೂ ಹಿಡಿದು ಮಹಾಮಂಡಲೇಶ್ವರಿಯಾಗಿ ಮಾಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ ಎಂದು ಆರೋಪಿಸಿದ್ದಾರೆ.
40ಕ್ಕೂ ಬಾಲಿವುಡ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಮಮತಾ ಕುಲಕರ್ಣಿ ಜನಪ್ರಿಯ ನಟಿಯಾಗಿರುವಾಗಲೇ ವಿವಾದಗಳಿಗೆ ಸಿಲುಕಿದ್ದರು. ಬಾಲಿವುಡ್ನಿಂದ ದೂರವಾದ ಬಳಿಕ ವಿದೇಶದಲ್ಲಿ ನೆಲೆಸಿದ್ದ ಅವರು ಕುಖ್ಯಾತ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ವಿಕ್ಕಿ ಗೋಸ್ವಾಮಿಯನ್ನು ಮದುವೆಯಾಗಿದ್ದಾರೆ ಎನ್ನಲಾಗಿತ್ತು. ವಿಕ್ಕಿ ಗೋಸ್ವಾಮಿ ವಿರುದ್ಧ 2 ಸಾವಿರ ಕೋ.ರೂ. ಮೊತ್ತದ ಡ್ರಗ್ ಸಾಗಿಸಿದ ಕೇಸ್ ಇದ್ದು, ಇದರಲ್ಲಿ ಮಮತಾ ಕುಲಕರ್ಣಿ ಕೂಡ ಆರೋಪಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಧು ಸಂತರು ಆಕೆಗೆ ಮಹಾಮಂಡಲೇಶ್ವರ ಪದವಿ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.