ಭಾರತಕ್ಕೆ ಗ್ಯಾಸ್ ಪೂರೈಸುತ್ತಿರುವ ಪ್ರಮುಖ ಅನಿಲ ಸ್ಥಾವರ
ಟೆಹ್ರಾನ್: ಕತಾರ್ನಲ್ಲಿರುವ ವಿಶ್ವದ ಅತಿದೊಡ್ಡ ಎಲ್ಎನ್ಜಿ ಸ್ಥಾವರದ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಪರ್ಷಿಯನ್ ಕೊಲ್ಲಿಯಾದ್ಯಂತ ಇಂಧನ ಸೌಲಭ್ಯಗಳ ಮೇಲಿನ ದಾಳಿಗಳು ತೀವ್ರವಾಗಿ ಹೆಚ್ಚುತ್ತಿರುವ ನಡುವೆ, ವಿಶ್ವದ ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ ರಫ್ತು ಸ್ಥಾವರವನ್ನು ಹೊಂದಿರುವ ಕತಾರ್ ಸಂಕೀರ್ಣವು ವ್ಯಾಪಕ ಹಾನಿಗೊಳಗಾಗಿದೆ.
ಈ ತಿಂಗಳ ಆರಂಭದಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಮೊದಲು ಜಾಗತಿಕ ಪೂರೈಕೆಯ ಐದನೇ ಒಂದು ಭಾಗದಷ್ಟು ಪಾಲನ್ನು ಹೊಂದಿದ್ದ ಎಲ್ಎನ್ಜಿ ಸ್ಥಾವರ ರಾಸ್ ಲಫಾನ್ ಕೈಗಾರಿಕಾ ನಗರಕ್ಕೆ ನೆಲೆಯಾಗಿದೆ. ಇರಾನ್ನ 4 ಕ್ಷಿಪಣಿಗಳನ್ನು ಕತಾರ್ ಹೊಡೆದುರುಳಿಸಿತ್ತು. ಆದರೆ, ಒಂದು ಕ್ಷಿಪಣಿ ಸ್ಥಾವರಕ್ಕೆ ಬಡಿದಿದೆ. ಗುರುವಾರ ನಸುಕಿನ ವೇಳೆ ಈ ದಾಳಿ ನಡೆದಿದೆ. ರಾಸ್ ಲಫಾನ್ ಮೇಲೆ ನಡೆದ ದಾಳಿಯಿಂದ ವ್ಯಾಪಕ ಬೆಂಕಿ ಆವರಿಸಿತ್ತು. ಅದನ್ನು ಕತಾರ್ ಅಧಿಕಾರಿಗಳು ನಿಭಾಯಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತೈಲ ಮತ್ತು ಅನಿಲ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗಳನ್ನು ನಡೆಸಲಾಗುತ್ತಿದೆ. ಇರಾನಿನ ದೈತ್ಯ ಸೌತ್ ಪಾರ್ಸ್ ಅನಿಲ ಕ್ಷೇತ್ರದ ಮೇಲೆ ಇಸ್ರೇಲ್ ದಾಳಿ ಮಾಡಿದ ನಂತರ ಕಚ್ಚಾ ಮತ್ತು ನೈಸರ್ಗಿಕ ಅನಿಲ ಬೆಲೆಗಳು ಏರಿಕೆ ಕಂಡಿವೆ. ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿರುವ ಹಲವಾರು ಇಂಧನ ತಾಣಗಳನ್ನು ಟಾರ್ಗೆಟ್ ಮಾಡಿದ್ದೇವೆಂದು ಇರಾನ್ ಎಚ್ಚರಿಸಿದೆ.
ಈ ಆಕ್ರಮಣವು ದೇಶದ ಸಾರ್ವಭೌಮತ್ವದ ಉಲ್ಲಂಘನೆ. ರಾಷ್ಟ್ರೀಯ ಭದ್ರತೆ ಮತ್ತು ಪ್ರದೇಶದ ಸ್ಥಿರತೆಗೆ ಬೆದರಿಕೆ ಒಡ್ಡಲಾಗಿದೆ ಎಂದು ಕತಾರ್ ಕಿಡಿಕಾರಿದೆ. ಇರಾನಿನ ಮಿಲಿಟರಿ ಮತ್ತು ಭದ್ರತಾ ಅಧಿಕಾರಿಗಳು ಹಾಗೂ ಅಂಗಸಂಸ್ಥೆ ಸಿಬ್ಬಂದಿಗೆ 24 ಗಂಟೆಗಳ ಒಳಗೆ ದೇಶವನ್ನು ತೊರೆಯುವಂತೆ ಕತಾರ್ ಖಡಕ್ ಆದೇಶ ಹೊರಡಿಸಿದೆ.
ಗಲ್ಫ್ ದೇಶಗಳಲ್ಲಿನ ಇಂಧನ ಮೂಲಸೌಕರ್ಯದ ಮೇಲೆ ಈ ದಾಳಿಯ ಪರಿಣಾಮ ಅನಿಲ ಮತ್ತು ತೈಲ ಬೆಲೆಗಳಲ್ಲಿ ಏರಿಕೆಗೆ ಕಾರಣವಾಗಬಹುದು. ರಾಸ್ ಲಫಾನ್ ಸಂಕೀರ್ಣದ ಮೇಲಿನ ಕ್ಷಿಪಣಿ ದಾಳಿಯು ಮಧ್ಯಪ್ರಾಚ್ಯ ಮತ್ತು ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಆಘಾತದ ಅಲೆಗಳನ್ನು ಹುಟ್ಟುಹಾಕಿದೆ.
ಈ ದಾಳಿಯು ಇರಾನ್ ಮತ್ತು ಯುಎಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಅಪಾಯಕಾರಿ ತಿರುವು. ಕತಾರ್ ಭಾರತದ ಅತಿದೊಡ್ಡ ಅನಿಲ ಪೂರೈಕೆದಾರ. ಭಾರತವು ಕತಾರ್ನಿಂದ ಅತಿ ಹೆಚ್ಚು ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ. ಭಾರತವು ವಾರ್ಷಿಕವಾಗಿ ಸುಮಾರು 27 ಮಿಲಿಯನ್ ಟನ್ ಎಲ್ಎನ್ಜಿಯನ್ನು ಆಮದು ಮಾಡಿಕೊಳ್ಳುತ್ತದೆ, ಇದರಲ್ಲಿ ಕತಾರ್ 47% ಅಥವಾ ವಾರ್ಷಿಕವಾಗಿ ಸರಿಸುಮಾರು 12-13 ಮಿಲಿಯನ್ ಟನ್ಗಳನ್ನು ಹೊಂದಿದೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿರುವುದರಿಂದ ಅನೇಕ ಭಾರತೀಯ ಅನಿಲ ಹಡಗುಗಳು ಇನ್ನೂ ಸಮುದ್ರದಲ್ಲಿ ಸಿಲುಕಿಕೊಂಡಿವೆ.



























