ಪೊಯಿನಾಚಿ: ಮಗನ ಸಾವಿನ ನೋವಿನಿಂದ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಮೇಲ್ಪರಂಬ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಪೊಯಿನಾಚಿ ಪರಂಬದ ವೇಣುಗೋಪಾಲನ್(55) ಮತ್ತು ಅವರ ಹೆಂಡತಿ ಸ್ಮಿತಾ(45) ಎಂದು ಗುರುತಿಸಲಾಗಿದೆ.
ದಂಪತಿಯ ಪುತ್ರ ಶಿವಾನಂದ್(19) ಎಂಬಾತ ಕಳೆದ ಡಿ. 29 ರಂದು ರೈಲು ಢಿಕ್ಕಿ ಹೊಡೆದು ಮೃತಪಟ್ಟಿದ್ದರು. ಆ ಬಳಿಕ ದಂಪತಿ ಖಿನ್ನತೆಗೊಳಗಾಗಿದ್ದರು ಎಂದು ತಿಳಿದು ಬಂದಿದೆ.
ಶುಕ್ರವಾರ ಬೆಳಗ್ಗೆ ಎಷ್ಟೇ ಹೊತ್ತಾದರೂ ವೇಣುಗೋಪಾಲನ್ ಅವರ ಮನೆಯ ಬಾಗಿಲು ತೆರೆಯದೇ ಇದ್ದು, ಸಂದೇಹದಿಂದ ನೆರೆಹೊರೆಯವರು ಇಣುಕಿ ನೋಡಿದ್ದು, ಆಗ ದಂಪತಿ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ವೇಣುಗೋಪಾಲನ್ ಅವರು ಆ ಬಳಿಕ ಪೊಯಿನಾಚಿಯಲ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದರು.
ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


























