ಪುತ್ತೂರು: ಸಾರ್ವಜನಿಕವಾಗಿ ತಲವಾರು ತೋರಿಸಿ ನಾಗರಿಕರಿಗೆ ಭಯ ಹುಟ್ಟಿಸಿದ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಸಂದರ್ಭದಲ್ಲಿ ತಲವಾರು ಪ್ರದರ್ಶಿಸಿದ ಆರೋಪಿಯ ಮೇಲೆ ಸ್ಥಳೀಯರು ಹಲ್ಲೆ ನಡೆಸಿರುವ ಪರಿಣಾಮ ಆತ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಮುಕ್ವೆ ಮಸೀದಿಯ ಸಮೀಪ ನರಿಮೊಗರು ನಿವಾಸಿ ಮಹಮ್ಮದ್ ಸಿರಾಜುದ್ದೀನ್ ಎಂಬವರು ನಿಂತಿದ್ದಾಗ ಅದೇ ಗ್ರಾಮದ ಅಬ್ದುಲ್ ರಹಮಾನ್ ಎಂಬಾತ ಈ ಮೊದಲೇ ನಡೆದಿದ್ದ ಗಲಾಟೆಯೊಂದಕ್ಕೆ ಸಂಬಂಧಿಸಿದ ಹಾಗೆ ತಕರಾರು ತೆಗೆದು ಅಲ್ಲಿಂದ ಹೋಗಿದ್ದ. ಆ ಬಳಿಕ ಸಿರಾಜುದ್ದೀನ್ ಮನೆಗೆ ಹೋಗುವ ಸಮಯದಲ್ಲಿ ಮುಕ್ವೆ ಸಮೀಪ ರಹಮಾನ್ ತಲವಾರ್ ಹಿಡಿದು ಯಾರನ್ನೋ ಕೊಲ್ಲುವ ಉದ್ದೇಶದಿಂದ ನಿಂತಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.
ಇದೇ ವೇಳೆ ತಲವಾರ್ ಝಳಪಿಸಿದ ರಹಮಾನ್ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಆತ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಗೆ ಸಂಬಂಧಿಸಿದ ಹಾಗೆ ಅಪರಿಚಿತ ವ್ಯಕ್ತಿಗಳು ತನಗೆ ಪ್ರಜ್ಞೆ ತಪ್ಪುವಂತೆ ಹಲ್ಲೆ ಮಾಡಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
























