ಬಾಗಿಲು ತೆರೆಯದೆ ಎರಡು ತಾಸು ಲೋಕಾಯುಕ್ತ ಅಧಿಕಾರಿಗಳನ್ನು ಸತಾಯಿಸಿದ ಎಇಇ
ಬೆಂಗಳೂರು: ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿಮುಟ್ಟಿಸಿದ್ದಾರೆ. ಬೆಂಗಳೂರಿನ 4 ಕಡೆ ಸೇರಿದಂತೆ ರಾಜ್ಯದ ಹಲವೆಡೆ ಇಂದು ಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ.
ಕೆಆರ್ಐಡಿಎಲ್ ಚೀಫ್ ಎಂಜಿನಿಯರ್ ವಸಂತ್ ವಿ. ನಾಯಕ್, ಬಿಡಿಎ ವ್ಯಾಪ್ತಿಯ ಆರ್ಎಫ್ಒ ಡಾಲೇಶ್, ರೈತ ಸೇವಾ ಸಹಕಾರ ಸಂಘದ ಸಿಇಒ ಶಶಿಧರ್ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಯಾದಗಿರಿಯ ವಿದ್ಯುತ್ ಇಲಾಖೆಯ ಉಪ ವಿದ್ಯುತ್ ಪರಿವೀಕ್ಷಕ ವೀರೇಶ್ ಹಿರೇಮಠ, ಮಂಡ್ಯದ ಲೋಕೋಪಯೋಗಿ ಇಲಾಖೆಯ ಮಂಡ್ಯ ಉಪವಿಭಾಗದ ಎಎಇ ಎಸ್.ಸತೀಶ್, ಧಾರವಾಡದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಕೆ.ಸುರಕೋಡ, ಹಾಸನ ಮಹಾನಗರ ಪಾಲಿಕೆಯ ಎಎಇ ಎಂ.ಸಿ.ಸತ್ಯನಾರಾಯಣ, ಮೈಸೂರಿನ ಜಲ ಭವನದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಎಇ ಮತ್ತು ಇಇ ಆಸಿಫ್ ಇಕ್ಬಾಲ್ ಹಾಗೂ ವಿಜಯಪುರದ ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ ಕಿರಿಯ ಇಂಜಿನಿಯರ್ ಆಗಿರುವ ಪ್ರಕಾಶ್ ಪಿ.ಜಿ. ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.
ಹಾಸನ ನಗರದ ರಕ್ಷಣಾಪುರಂನಲ್ಲಿರುವ ಹಾಸನ ಮಹಾನಗರಪಾಲಿಕೆ ಎಇಇ ಎಂ.ಸಿ ಸತ್ಯನಾರಾಯಣ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದಾಗ ಹೈಡ್ರಾಮಾ ನಡೆದಿದೆ. ಲೋಕಾಯುಕ್ತ ಡಿವೈಎಸ್ಪಿ ಸುರೇಶ್ ಕುಮಾರ್, ಇನ್ಸ್ಪೆಕ್ಟರ್ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆದಿದ್ದು ಬೆಳಗ್ಗೆ 5.15ಕ್ಕೆ ಸತ್ಯನಾರಾಯಣ ಅವರ ಮನೆಯೊಳಗೆ ಪರಿಶೀಲನೆ ಮಾಡಲು ಲೋಕಾಯುಕ್ತ ಅಧಿಕಾರಿಗಳು ಬಂದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಬರುತ್ತಿದ್ದಂತೆ ಮನೆಯ ಲೈಟ್ ಆಫ್ ಮಾಡಿದ್ದು ಮನೆಯ ಬಾಗಿಲು ತೆರೆಯದ ಸತ್ಯನಾರಾಯಣ ಅಧಿಕಾರಿಗಳನ್ನು ಸತಾಯಿಸಿದ್ದಾರೆ.
ಸತತ 2 ಗಂಟೆಯಿಂದ ಮನೆಯ ಬಾಗಿಲು ತೆಗೆಸಲು ಲೋಕಾಯುಕ್ತ ಅಧಿಕಾರಿಗಳು ಹರಸಾಹಸಡಪಡುತ್ತಿದ್ದಾರೆ. ಬಿಲ್ಡಿಂಗ್ ಹತ್ತಿ ಕಿಟಕಿ ಬಡಿದು, ಕೂಗಿದರು ಸತ್ಯನಾರಾಯಣ ಬಾಗಿಲು ತೆರೆಯುತ್ತಿಲ್ಲ. ಮನೆಯ ಸುತ್ತಲೂ ಓಡಾಡಿ ಬಾಗಿಲು ತೆರಸಲು ಪ್ರಯತ್ನಿಸುತ್ತಿದ್ದು ಸತತ 2 ಗಂಟೆಗೂ ಹೆಚ್ಚು ಕಾಲದಿಂದ ಮನೆಯ ಬಳಿಯೇ ಬೀಡುಬಿಟ್ಟಿದ್ದಾರೆ. ಸತ್ಯನಾರಾಯಣ ಫೋನ್ ಕೂಡ ಸ್ವಿಚ್ ಆಫ್ ಮಾಡಿದ್ದಾರೆ.
ಸತ್ಯನಾರಾಯಣ ಬಾಗಿಲು ತೆರೆಯದೆ ಸತಾಯಿಸುತ್ತಿರುವ ಕಾರಣ ಸ್ಥಳಕ್ಕೆ ಲೋಕಾಯುಕ್ತ ಎಸ್ಪಿ ನಂದಿನಿ ಭೇಟಿ ನೀಡಿ ಪರಿಸ್ಥಿತಿ ಮೇಲ್ವಿಚಾರಣೆ ನಡೆಸಿದ್ದಾರೆ.
























