ಬೆಂಗಳೂರು: ಜ್ಯೋತಿಷಿ ಹೇಳಿದ ಭವಿಷ್ಯವಾಣಿಗೆ ಹೆದರಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬಾಗಲಕುಂಟೆಯಲ್ಲಿ ನಡೆದಿದೆ.
ವಿದ್ಯಾ ಜ್ಯೋತಿ (29) ಎಂಬಾಕೆಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವತಿ. ಆಕೆಗೆ ಜ್ಯೋತಿಷಿ ಅಲ್ಪಾಯುಷಿ ಎಂದು ಭವಿಷ್ಯ ಹೇಳಿದ್ದು, ಇದರಿಂದಾಗಿ ಹೆದರಿ ಆಕೆ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.
ಯುವತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ವರ್ಕ್ ಫ್ರಂ ಹೋಂ ಮಾಡುತ್ತಿದ್ದಳು. ಹೆತ್ತವರು ಸಹ ಮಗಳಿಗಾಗಿ ಎಲ್ಲವನ್ನೂ ಮಾಡಿದ್ದರು. ಅವಳ ಇಷ್ಟದಂತೆ ಆಕೆ ಪ್ರೀತಿಸಿದ ಯುವಕನನ್ನೇ ವಿವಾಹವಾಗುವುದಕ್ಕೂ ಸಮ್ಮತಿ ಸೂಚಿಸಿದ್ದರು. ಆದರೆ ಜ್ಯೋತಿಷಿಯ ಮಾತಿನಿಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದು ಆಕೆಯ ಬಗ್ಗೆ ಇರಿಸಿಕೊಂಡಿದ್ದ ಎಲ್ಲಾ ಕನಸುಗಳಿಗೂ ಎಳ್ಳು ನೀರು ಬಿಟ್ಟಂತಾಗಿದೆ.
ಇನ್ನು ಜ್ಯೋತಿಷಿ 9 ದಿನ ಪೂಜೆ ಮಾಡಲು ಸೂಚಿಸಿದ್ದರು. ಅದರಂತೆ ಮನೆಯಲ್ಲಿ ಒಂಬತ್ತನೇ ದಿನದ ಪೂಜೆ ನಡೆಯುತ್ತಿತ್ತು. ಕೊನೆಯ ದಿನವಾದ್ದರಿಂದ ಮಾರಮ್ಮ ದೇವರಿಗೆ ತಾಳಿ ಕೊಡುವಂತೆ ಜ್ಯೋತಿಷಿ ತಿಳಿಸಿದ್ದರು. ಮನೆಯಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಊಟದ ನಂತರ ವಿದ್ಯಾ ರೂಂಗೆ ಹೋಗಿದ್ದಳು. ಸಂಜೆ ತಾಯಿ ಕೂಗಿದ್ದರೂ ಕೂಡ ವಿದ್ಯಾ ಹೊರಬಂದಿರಲಿಲ್ಲ. ಕೆಲಸ ಮಾಡುತ್ತಿರಬೇಕೆಂದು ಎಲ್ಲರೂ ಸುಮ್ಮನಾಗಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ತಾಯಿ ದೇವಸ್ಥಾನಕ್ಕೆ ತೆರಳಲು ವಿದ್ಯಾಳನ್ನು ಕರೆದಿದ್ದರು. ಬಾಗಿಲನ್ನು ತೆಗೆಯದೇ ಇದ್ದಾಗ ಅನುಮಾನಗೊಂಡು ಕಿಟಕಿಯಲ್ಲಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
























