ಚಿಕ್ಕಮಗಳೂರು: ಕೃಷಿಕರೊಬ್ಬರು ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಅವರ ಮೇಲೆ ಕಾಡುಕೋಣ ದಾಳಿ ಮಾಡಿರುವ ಘಟನೆ ಕೊಪ್ಪ ತಾಲೂಕಿನ ಮುಂಡೋಳು ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.
ಗಾಯಾಳುವನ್ನು ಶಿವಪ್ಪ ಗೌಡ(65) ಎಂದು ಗುರುತಿಸಲಾಗಿದೆ.
ಇಂದು ಮುಂಜಾನೆ ತೋಟಕ್ಕೆ ನೀರು ಹಾಯಿಸುವ ಸಲುವಾಗಿ ಮೋಟಾರ್ ಸ್ವಿಚ್ ಆನ್ ಮಾಡಲು ಹೋಗಿದ್ದು, ಈ ವೇಳೆ ಕಾಡುಕೋಣ ಹಿಂದಿನಿಂದ ಬಂದು ದಾಳಿ ಮಾಡಿದೆ. ಅವರ ತೊಡೆ ಮತ್ತು ಬೆನ್ನಿಗೆ ಗಾಯಗಳಾಗಿ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಪ್ರಮಾಣದ ಗಾಯಗಳಾಗಿರುವ ಕಾರಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ಸ್ಥಳೀಯರು ಕಾಡು ಪ್ರಾಣಿಗಳ ಹಾವಳಿಗೆ ಸೂಕ್ತ ಪರಿಹಾರ ಹುಡುಕದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಅರಣ್ಯ ಇಲಾಖೆಗೆ ಎಚ್ಚರಿಸಿದ್ದಾರೆ.
























