ಮಂಗಳೂರು: ಅತಿ ವೇಗದಿಂದ ಬಂದ ಬೈಕ್ ಒಂದು ಸವಾರನ ನಿಯಂತ್ರಣಕ್ಕೆ ಸಿಗದೆ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ಬೈಕ್ ಸವಾರರಾದ ವಿದ್ಯಾರ್ಥಿಗಳಿಬ್ಬರು ಪವಾಡ ಎಂಬಂತೆ ಪಾರಾದ ಘಟನೆ ಉಳ್ಳಾಲದ ಕಿನ್ಯ ಸಂಕೇಶದಲ್ಲಿ ನಡೆದಿದೆ.
ಢಿಕ್ಕಿಯಾದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಅಪಘಾತದ ದೃಶ್ಯಾವಳಿಗಳು ಸಿಸಿಟಿವಿಯಲ್ಲೂ ಲಭ್ಯವಾಗಿವೆ. ದ್ವಿಚಕ್ರ ವಾಹನದಲ್ಲಿ ಬಿಜಾಪುರ ಮೂಲದ ಇಬ್ಬರು ಯುವಕರಿದ್ದರು ಎಂದು ತಿಳಿದು ಬಂದಿದೆ.
ವಿದ್ಯುತ್ ಕಂಬ ಮುರಿದು ತಂತಿಗಳು ರಸ್ತೆಗೆ ಬಿದ್ದಿದ್ದು ಅದರಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ಭಯದಿಂದ ಸಾರ್ವಜನಿಕರು ಅತ್ತ ಹೋಗಿಲ್ಲ. ಇದರಿಂದ ಮತ್ತಷ್ಟು ಸಂಭವನೀಯ ಅಪಾಯಗಳು ತಪ್ಪಿವೆ. ಹಾಗೆಯೇ ಈ ಅಪಘಾತದಲ್ಲಿ ಬೈಕ್ ಸವಾರರು ರಸ್ತೆಗೆ ಬಿದ್ದಿದ್ದಾರೆ. ಆದರೆ ಯಾವುದೇ ರೀತಿಯ ಗಂಭೀರ ಪ್ರಮಾಣದ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಮೆಸ್ಕಾಂ ಇಲಾಖೆ ದೂರು ದಾಖಲು ಮಾಡಿದೆ.
























