ನೆಲ್ಯಾಡಿಯ ಕೊಪ್ಪಮಾದೇರಿಯಲ್ಲಿ ಸಂಭವಿಸಿದ ಪ್ರಕರಣ
ಉಪ್ಪಿನಂಗಡಿ: ಏಳು ದಿನದ ಹಿಂದೆ ಸಂಭವಿಸಿದ ನೆಲ್ಯಾಡಿ ಗ್ರಾಮದ ಕೊಪ್ಪಮಾದೇರಿ ನಿವಾಸಿ ವೃದ್ಧ ಕೆ.ಸಿ ವರ್ಗೀಸ್ (73) ಅವರ ಅಸಹಜ ಸಾವು ಪ್ರಕರಣ ಕೊಲೆ ಪ್ರಕರಣ ಎಂದು ಖಚಿತ ಪಡಿಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತರ ಮಗ ಹಾಗೂ ಸಂಬಂಧಿಕರಾದ ಕೆ.ವಿ. ತೋಮಸ್ (39), ಸಿ.ಟಿ ರಾಜು (59), ಚಾಕೊಚ್ಚ (51) ಬಂಧಿತರು.
ಫೆ.9ರಂದು ಉಪ್ಪಿನಂಗಡಿ ಠಾಣೆಯಲ್ಲಿ ಕೆ.ಸಿ.ವರ್ಗೀಸ್ ಸಾವಿಗೆ ಸಂಬಂಧಪಟ್ಟಂತೆ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಕೆ.ಸಿ ವರ್ಗೀಸ್ ಅವರು ತಲೆಗೆ ಬಿದ್ದ ಗಂಭೀರ ಏಟು ಮತ್ತು ದೇಹದ ಇತರ ಭಾಗಗಳಿಗೆ ಆಗಿರುವ ಗಾಯದಿಂದಾಗಿ ಮೃತಪಟ್ಟಿರುವುದಾಗಿ ವೈದ್ಯಕೀಯ ವರದಿ ಬಂದಿದೆ.
ಮೃತ ಕೆ.ಸಿ ವರ್ಗಿಸ್ ತನ್ನ ಹೆಂಡತಿಗೆ ಹೊಡೆದಿದ್ದಾರೆ. ಇದನ್ನು ನೋಡಿದ ಒಬ್ಬ ವ್ಯಕ್ತಿ ಈ ಬಗ್ಗೆ ಆಕೆಯ ಮಗ ಕೆ.ವಿ ತೋಮಸ್ಗೆ ತಿಳಿಸಿದ್ದಾನೆ. ಮಗನು ತನಗೆ ಪರಿಚಯದ ಒಬ್ಬ ಆಟೋರಿಕ್ಷಾದವರನ್ನು ಬರಮಾಡಿ ಆಸ್ಪತ್ರೆಗೆ ಕಳುಹಿಸಿದ್ದಾನೆ. ಆಗ ಆಕೆಯ ತಮ್ಮ ರಾಜು ಆಸ್ಪತ್ರೆಗೆ ಬಂದು ನೋಡಿ ತನ್ನ ತಮ್ಮ ಚಾಕೋಚ್ಚನಿಗೆ ಕಾಲ್ ಮಾಡಿ ಅಕ್ಕನಿಗೆ ಅವರ ಗಂಡ ಹೊಡೆದಿರುವುದಾಗಿ ತಿಳಿಸಿ ಬೇಗ ಬಾ ಎಂದು ಕರೆದಿದ್ದಾನೆ. ಹಾಗೆ ಬಂದು ಥಾಮಸ್ಗೆ ಕರೆ ಮಾಡಿ ವರ್ಗೀಸ್ರನ್ನು ಹೆದರಿಸಬೇಕೆಂದು ಚರ್ಚೆ ಮಾಡಿ ಥಾಮಸ್ನನ್ನು ಸ್ವಲ್ಪ ದೂರ ಹೊರಗೆ ಬಿಟ್ಟು ಚಾಕೊಚ್ಚ ಮತ್ತು ರಾಜುರವರು ಒಳಗೆ ಹೋಗಿ ಮೃತ ಕೆ.ಸಿ ವರ್ಗಿಸ್ರವರಿಗೆ ಕಟ್ಟಿಗೆಯಿಂದ ಹೊಡೆದಿದ್ದಾರೆ.
ಬಳಿಕ ಹೊರಗೆ ಬಂದು ಥಾಮಸ್ ಬಳಿ ಅವರಿಗೆ ಸರಿಯಾಗಿ ಹೊಡೆದಿದ್ದೇವೆ ಅವರನ್ನು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದು ಹೇಳಿ ಹೋಗಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಥಾಮಸ್ ತಂದೆ ಮಂಚದಿಂದ ಕೆಳಗೆ ಬಿದ್ದು ಅಲ್ಲಿದ್ದ ಕಲ್ಲಿಗೆ ತಲೆ ತಾಗಿ ಪೆಟ್ಟಾಗಿ ಮೃತರಾಗಿರಬಹುದಾಗಿ ಇದೊಂದು ಆಸ್ವಾಭಾವಿಕ ಪ್ರಕರಣವೆಂದು ತಿಳಿಸಿದ್ದಾನೆ. ಆದರೆ ಸಂದೇಹದ ಹಿನ್ನೆಲೆ ಉಪ್ಪಿನಂಗಡಿ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸಿದಾಗ ಅಸಲಿಯತ್ತು ಬಯಲಾಗಿದ್ದು ಮೂವರನ್ನು ಬಂಧಿಸಲಾಗಿದೆ
























