ಕೋಟ್ಯಾಂತರ ರೂಪಾಯಿ ಕೇಳಿ ವಾಟ್ಸಪ್ ಮೂಲಕ ಬೆದರಿಕೆ ಸಂದೇಶ ರವಾನೆ
ಮುಂಬೈ: ಸೂಪರ್ ಹಿಟ್ ಸಿನೆಮಾ ಧುರಂದರ್ ಖ್ಯಾತಿಯ ನಟ ರಣವೀರ್ ಸಿಂಗ್ ಅವರಿಗೆ ಬೆದರಿಕೆ ಹಾಕಲಾಗಿದೆ. ವಾಟ್ಸಪ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ದಂಪತಿಯ ನಿವಾಸಕ್ಕೆ ಭದ್ರತೆ ಒದಗಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಮೊದಲು ಬಾಲಿವುಡ್ನ ಹಲವು ಸೆಲೆಬ್ರಿಟಿಗಳಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರು ಬೆದರಿಕೆ ಹಾಕಿದ್ದರು. ಈಗಲೂ ರಣವೀರ್ ಸಿಂಗ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರೇ ಬೆದರಿಕೆ ಸಂದೇಶ ಕಳಿಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬೆದರಿಕೆ ಸಂದೇಶ ಬಂದ ಬಳಿಕ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮನೆಯ ಸುತ್ತಮುತ್ತ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಭದ್ರತೆ ನೀಡುವ ದೃಷ್ಟಿಯಿಂದ ರಣವೀರ್ ಸಿಂಗ್ ನಿವಾಸದ ಬಳಿ ಶಸ್ತ್ರಾಸ್ತ್ರ ಹಿಡಿದ ಭದ್ರತಾ ಸಿಬ್ಬಂದಿ ಓಡಾಡುತ್ತಿದ್ದಾರೆ. ಇದರಿಂದಾಗಿ ನೆರೆಹೊರೆಯವರಿಗೆ ಆತಂಕ ಹೆಚ್ಚಾಗಿದೆ. ಅಪಾರ್ಟ್ಮೆಂಟ್ನಲ್ಲಿ ಇರುವ ಇನ್ನುಳಿದ ನಿವಾಸಿಗಳು ಈ ಬಗ್ಗೆ ಪೊಲೀಸರ ಬಳಿ ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ರಣವೀರ್ ಸಿಂಗ್ ಅವರಿಗೆ ಬೆದರಿಕೆ ಹಾಕಿರುವ ಕಿಡಿಗೇಡಿಗಳು ಕೋಟ್ಯಾಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ವಾಟ್ಸಪ್ ವಾಯ್ಸ್ ನೋಟ್ ಮೂಲಕ ಅವರಿಗೆ ಬೆದರಿಕೆ ಹಾಕಲಾಗಿದೆ. ಬೆದರಿಕೆ ಸಂದೇಶ ಬಂದ ಕೂಡಲೇ ರಣವೀರ್ ಸಿಂಗ್ ಮುಂಬೈ ಪೊಲೀಸರಿಗೆ ಮಾಹಿತಿ ತಿಳಿಸಿದರು. ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿದ್ದಾರೆ.
ಕಳೆದ ವರ್ಷ ಬಿಡುಗಡೆ ಆದ ‘ಧುರಂದರ್’ ಸಿನಿಮಾದಿಂದ ರಣವೀರ್ ಸಿಂಗ್ ಅವರಿಗೆ ದೊಡ್ಡ ಗೆಲುವು ಸಿಕ್ಕಿತು. ಚಿತ್ರರಂಗದಲ್ಲಿ ಅವರಿಗೆ ಇರುವ ಬೇಡಿಕೆ ಹೆಚ್ಚಾಯಿತು. ಅದಕ್ಕೆ ತಕ್ಕಂತೆ ಅವರ ಸಂಭಾವನೆ ಕೂಡ ಜಾಸ್ತಿ ಆಗಿದೆ. ಈ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ರಣವೀರ್ ಸಿಂಗ್ ಬಳಿ ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು, ಬೆದರಿಕೆ ಸಂದೇಶ ಕಳಿಸಿದ್ದಾರೆ.
























