ನವದೆಹಲಿ: ಉಗ್ರವಾದಕ್ಕೆ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನಕ್ಕೆ ಯಾವುದೇ ಕಾರಣಕ್ಕೂ ಸಿಂಧೂ ನದಿಯ ನೀರನ್ನು ಬಿಡಲಾಗದು ಎಂದು ಭಾರತ ಗಟ್ಟಿ ಧ್ವನಿಯಲ್ಲಿ ಹೇಳಿದ್ದು, ಅಂತರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದೆ.
ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯವು ಸಿಂಧೂ ನದಿನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲೆಗಳ ಸಲ್ಲಿಕೆಗೆ ಆದೇಶ ನೀಡಿತ್ತು. ಆದರೆ ಈ ಮಧ್ಯಸ್ಥಿಕೆ ನ್ಯಾಯಾಲಯವು ಕಾನೂನು ಬಾಹಿರ ರಚನೆಯಾಗಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಭಾರತ ನಿರಾಕರಣೆ ತೋರಿಸಿದೆ.
ಹಾಗೆಯೇ ಈ ಸಂಬಂಧ ಹೇಗ್ನಲ್ಲಿರುವ ಪೀಸ್ ಪ್ಯಾಲೇಸ್ನಲ್ಲಿ ನ್ಯಾಯಾಲಯ ನಿಗದಿ ಮಾಡಿರುವ ಮಾತುಕತೆಗೂ ಭಾರತ ಹಾಜರಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಪ್ರಸ್ತುತ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವು ಅಮಾನತಿನಲ್ಲಿ ಇರುವುದರಿಂದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಉತ್ತರ ನೀಡಲು ತಾನು ಬದ್ಧನಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಇದರಿಂದ ಸಿಂಧೂ ನದಿ ನೀರಿಗಾಗಿ ಹೆಣಗಾಡುತ್ತಿರುವ ಪಾಕಿಸ್ತಾನ, ಭಾರತವನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ತಂತ್ರಕ್ಕೆ ಮತ್ತೆ ಹಿನ್ನಡೆಯಾಗಿದೆ.
























