ಪೊಲೀಸರ ಕಣ್ತಪ್ಪಿಸಿ ಮೂರು ದಿನಗಳಿಂದ ಮಂಗಳೂರಿನಲ್ಲಿ ಅಡಗಿಕೊಂಡಿದ್ದ ಕಾಂಗ್ರೆಸ್ ನಾಯಕ
ಮಂಗಳೂರು : ಬ್ಯಾನರ್ ತೆರವು ಮಾಡಿದ ವಿಚಾರಕ್ಕೆ ಸಂಬಂಧಿಸಿ ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾ ಗೌಡ ಅವರನ್ನು ನಿಂದಿಸಿ, ಬೆದರಿಕೆ ಹಾಕಿದ್ದ ಕಾಂಗ್ರೆಸ್ ನಾಯಕ ರಾಜೀವ್ ಗೌಡನನ್ನೂ ಕೊನೆಗೂ ಪೊಲೀಸರು ಸೋಮವಾರ ಬಂಧಿಸಿದ್ದಾರೆ. 14 ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ಕೇರಳ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ರಾಜೀವ್ ಗೌಡನಿಗೆ ಇಷ್ಟು ದಿನ ಮಂಗಳೂರಿನ ಶ್ರೀಮಂತ ಉದ್ಯಮಿಯೊಬ್ಬರು ಆಶ್ರಯ ನೀಡಿದ್ದರು ಎನ್ನುವ ಸ್ಫೋಟಕ ಮಾಹಿತಿ ಈಗ ಬಯಲಾಗಿದೆ. ಆಶ್ರಯ ನೀಡಿದ್ದ ಉದ್ಯಮಿಯ ಕಾರಿನ ಮೂಲಕವೇ ಮಂಗಳೂರಿನಿಂದ ಕೇರಳಕ್ಕೆ ಪರಾರಿಯಾಗುತ್ತಿರುವ ವೇಳೆ ರಾಜೀವ್ ಗೌಡನನ್ನು ಪೊಲೀಸರು ಹಿಡಿದಿದ್ದಾರೆ. ಈ ಉದ್ಯಮಿ ಯಾರು ಎನ್ನುವ ಕುತೂಹಲ ಉಂಟಾಗಿದೆ.
ಜನವರಿ 12ರಂದು ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾ ಗೌಡಗೆ ಕಲ್ಟ್ ಸಿನಿಮಾ ಬ್ಯಾನರ್ ತೆರವು ಮಾಡಿದ್ದಕ್ಕೆ ರಾಜೀವ್ ಗೌಡ ಧಮ್ಕಿ ಹಾಕಿದ್ದ. ಜನವರಿ 14ರಂದು ಈ ಬಗ್ಗೆ ರಾಜೀವ್ ಗೌಡ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ 13 ದಿನಗಳಿಂದ ಚಿಕ್ಕಬಳ್ಳಾಪುರ ಬಿಟ್ಟು ಪರಾರಿಯಾಗಿದ್ದ. ಇದರ ಬೆನ್ನಲ್ಲೇ ಜನವರಿ 24ರಂದು ರಾಜೀವ್ನನ್ನು ಕೆಪಿಸಿಸಿ ಶಿಸ್ತು ಸಮಿತಿ ಅಮಾನತು ಮಾಡಿತ್ತು. ಜೊತೆಗೆ FIR ರದ್ದುಕೋರಿ ರಾಜೀವ್ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಬಂಧನದ ಭೀತಿಯಲ್ಲಿದ್ದ ರಾಜೀವ್ ಗೌಡನಿಗೆ ಮಂಗಳೂರಿನಲ್ಲಿ ಉದ್ಯಮಿಯೊಬ್ಬರ ಬಳಿ 3 ದಿನದಿಂದ ಆಶ್ರಯ ಪಡೆದಿದ್ದ. ಪೊಲೀಸರ ಕಣ್ತಪ್ಪಿಸಲು ಮಂಗಳೂರು ರೈಲ್ವೆ ಸ್ಟೇಷನ್ನಲ್ಲಿ ಕಾರು ನಿಲ್ಲಿಸಿ ಕಳ್ಳಾಟ ಆಡಿದ್ದ. ಉದ್ಯಮಿ ಕಾರಿನಲ್ಲೇ ತಲಪಾಡಿ ಮಾರ್ಗವಾಗಿ ಕಾಸರಗೋಡಿನತ್ತ ಹೋಗುತ್ತಿದ್ದ ರಾಜೀವ್ ಗೌಡನನ್ನು ಹಿಡಿದು ಕೈಗೆ ಕೋಳ ತೊಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾಗೌಡಗೆ ಧಮ್ಕಿ ಹಾಕಿ ಕಳೆದ 14 ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ರಾಜೀವ್ ಗೌಡನಿಗೆ ಮಂಗಳೂರಿನ ಶ್ರೀಮಂತ ಉದ್ಯಮಿಯೊಬ್ಬರು ಆಶ್ರಯ ಕೊಟ್ಟಿದ್ದರು. ರಾಜೀವ್ ಗೌಡ ಮಂಗಳೂರಿನ ಉದ್ಯಮಿಯ ಆಶ್ರಯದಲ್ಲಿದ್ದಾನೆ ಎನ್ನುವ ಮಾಹಿತಿ ಪೊಲೀಸರಿಗೆ ತಿಳಿಯುತ್ತಿದ್ದಂತೆಯೇ ಬಂಧನಕ್ಕೆ ಬಲೆ ಬೀಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರ ದಿಕ್ಕು ತಪ್ಪಿಸಲು ಆರೋಪಿ ರಾಜೀವ್ ಗೌಡ ತನ್ನ ಕಾರನ್ನು ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ್ದ. ಬಳಿಕ ಆಶ್ರಯ ಕೊಟ್ಟಿದ್ದ ಉದ್ಯಮಿಯ ಕಾರಿನಲ್ಲಿ ತಲಪಾಡಿ ಮಾರ್ಗವಾಗಿ ಕಾಸರಗೋಡು ಕಡೆ ಹೋಗಿದ್ದ.
ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ತನ್ನ ಕಾರು ಬಿಟ್ಟು ಉದ್ಯಮಿಯ ಕಾರಿನಲ್ಲಿ ತೆರಳಿದ್ದಾನೆ ಎಂದು ತಿಳಿದ ಪೊಲೀಸರು, ಉದ್ಯಮಿಯ ಕಾರು ಯಾವ ಕಡೆ ಹೋಗಿದೆ ಎನ್ನುವುದನ್ನು ಕಾರ್ಯಚರಣೆ ನಡೆಸಿದ್ದು, ಆಗ ತಲಪಾಡಿ ಮಾರ್ಗವಾಗಿ ಕಾಸರಗೋಡು ಕಡೆ ತೆರಳಿರುವ ಮಾಹಿತಿ ಸಿಕ್ಕಿದೆ. ಬಳಿಕ ಇದೇ ಮಾರ್ಗದಲ್ಲಿ ಉದ್ಯಮಿಯ ಕಾರು ಜಾಡು ಹಿಡಿದು ಹೊರಟ ಶಿಡ್ಲಘಟ್ಟ ಪೊಲೀಸ್ ವೃತ್ತ ನಿರೀಕ್ಷಕ ಆನಂದಕುಮಾರ್ ತಂಡಕ್ಕೆ ಕೇರಳ ಗಡಿ ಭಾಗದಲ್ಲಿ ಆರೋಪಿ ರಾಜೀವ್ ಗೌಡ ಸಿಕ್ಕಿಬಿದ್ದಿದ್ದಾನೆ.
ರಾಜೀವ್ ಗೌಡ ವಿರುದ್ಧ ಜನವರಿ 14 ರಂದು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಎರಡು ದೂರುಗಳು ದಾಖಲಾಗಿದ್ದವು. ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಗೌಡರಿಂದ ಒಂದು ದೂರು, ಶಾಸಕ ರವಿಕುಮಾರ್ ಪರವಾಗಿ ಒಂದು ದೂರು ದಾಖಲಾಗಿತ್ತು. ಬೆದರಿಕೆ ಪತ್ರ ಹಿನ್ನೆಲೆ ಮೊನ್ನೆ ಮತ್ತೊಂದು ದೂರು ದಾಖಲಾಗಿತ್ತು. ಹೀಗಾಗಿ ರಾಜೀವ್ ಗೌಡ ಬಂಧನಕ್ಕೆ ರಾಜ್ಯಾದ್ಯಂತ ಒತ್ತಾಯ ಕೇಳಿ ಬಂದಿತ್ತು.
























