ಡೆಹ್ರಾಡೂನ್: ಬದರೀನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ಇನ್ನು ಮುಂದಿನ ದಿನಗಳಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಚಾರ್ಧಾಮ್ ಯಾತ್ರಾ ಸ್ಥಳಗಳ ವ್ಯಾಪ್ತಿಯ ದೇಗುಲಗಳಿಗೆ ಅನ್ಯ ಧರ್ಮದವರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುವುದಾಗಿ ದೇವಾಲಯ ಮಂಡಳಿ ಘೋಷಣೆ ಮಾಡಿದೆ.
ಈ ಬಗ್ಗೆ ಬಿ.ಕೆ.ಟಿ.ಸಿ. ಅಧ್ಯಕ್ಷ ಹೇಮಂತ್ ದ್ವಿವೇದಿ ಅವರು ಅಧಿಕೃತ ಮಾಹಿತಿ ನೀಡಿದ್ದು, ಮಂಡಳಿಯ ನಿಯಂತ್ರಣದಲ್ಲಿರುವ ಎಲ್ಲಾ ಮಂದಿರಗಳಲ್ಲಿ ಅನ್ಯಧರ್ಮೀಯರ ಪ್ರವೇಶವನ್ನು ನಿಷೇಧಿಸಲಾಗುವುದು. ಮುಂಬರುವ ಮಂಡಳಿಯ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಅಧಿಕೃತ ನಿರ್ಣಯವನ್ನು ಅಂಗೀಕರಿಸಲಾಗುವುದಾಗಿ ಹೇಳಿದ್ದಾರೆ.
ಬದರಿನಾಥ ದೇವಸ್ಥಾನವು ಚಳಿಗಾಲದ ಆರು ತಿಂಗಳ ನಂತರ ಏಪ್ರಿಲ್ 23 ರಂದು ಬಾಗಿಲು ತೆರೆಯಲಿದೆ. ಹಾಗೆಯೇ ಕೇದಾರನಾಥ ದೇವಸ್ಥಾನವು ಬಾಗಿಲು ತೆರೆಯುವ ನಿಖರ ದಿನಾಂಕವನ್ನು ಮಹಾಶಿವರಾತ್ರಿಯಂದು ಘೋಷಿಸಲಾಗುವುದು. ಅಕ್ಷಯ ತೃತೀಯದ ಸಂದರ್ಭದಲ್ಲಿ ಅಂದರೆ ಏಪ್ರಿಲ್ 19 ರಂದು ಗಂಗೋತ್ರಿ ಮತ್ತು ಯಮುನೋತ್ರಿ ಎರಡು ಧಾಮಗಳ ಬಾಗಿಲು ತೆರೆಯಲಿದೆ.
ಚಾರ್ ಧಾಮ್ ಯಾತ್ರೆಯ ಪವಿತ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ.
























