ಜನಪ್ರಿಯ ಬ್ರಾಂಡ್ನ ಅವಧಿ ಮೀರಿದ ಬಿಯರ್ ಪೂರೈಸಿದ ಬಾರ್ನವರು
ಬೆಂಗಳೂರು : ಅವಧಿ ಮೀರಿದ ಬಿಯರ್ ಕುಡಿದ ಪರಿಣಾಮ ಕೆಲವರು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿ ಆಸ್ಪತ್ರೆ ಪಾಲಾದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಳದೇನಹಳ್ಳಿಯ ವೆಂಕಟ್ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ನಡೆದಿದೆ. ಗುರುವಾರ ಸಂಜೆ ಯುವಕರ ಗುಂಪೊಂದು ಒಂದು ಕೇಸ್ ಬಡ್ವೈಸರ್ ಬಿಯರ್ ಖರೀದಿಸಿ ಸೇವಿಸಿದ ನಂತರ ವಾಂತಿ ಆಗಿದ್ದು, ಅವರನ್ನು ತಕ್ಷಣ ಮಾಲೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಂಬ್ಯುಲೆನ್ಸ್ ಬಳಸಿದರೆ ಮುಜುಗರ ಆಗುತ್ತದೆ ಎಂಬ ಕಾರಣಕ್ಕಾಗಿ ಖಾಸಗಿ ವಾಹನಗಳನ್ನು ಬಳಸಿಕೊಂಡು ಖಾಸಗಿ ಆಸ್ಪತ್ರೆಗಳಲ್ಲಿ ಯುವಕರು ರಹಸ್ಯವಾಗಿ ಟ್ರೀಟ್ಮೆಂಟ್ ಪಡೆದುಕೊಂಡಿದ್ದಾರೆ. ವೈದ್ಯರು ಪ್ರಾಣಕ್ಕೇನೂ ಅಪಾಯವಿಲ್ಲ ಎಂದು ಭರವಸೆ ಕೊಟ್ಟ ನಂತರ ಬಾರ್ ಬಳಿ ಬಂದು ಗೆಳೆಯರ ಗುಂಪು ಗಲಾಟೆ ಮಾಡಿದೆ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ಮಧ್ಯೆ ಪ್ರವೇಶವಾಗಿದ್ದು, ರಾಜಿ ಪಂಚಾಯತಿ ಮೂಲಕ ತಕರಾರು ಬಗೆಹರಿಸಿಕೊಳ್ಳಲಾಗಿದೆ.
ಬಾರ್ ಮಾಲೀಕ ನಾಗರಾಜ್ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿದ ಕಾರಣ ಗಲಾಟೆ ಬೆಳಕಿಗೆ ಬಂದಿರಲಿಲ್ಲ. ಶುಕ್ರವಾರ ರಾತ್ರಿ ವೇಳೆಗೆ ವಿಷಯ ಬಯಲಾಗಿದೆ. ಅಬಕಾರಿ ಇಲಾಖೆ ನಿಯಮಾವಳಿ ಪ್ರಕಾರ ಅಧಿಕಾರಿಗಳು ಪ್ರತಿಯೊಂದು ಮದ್ಯದಂಗಡಿಗೂ ಭೇಟಿ ನೀಡಿ ಪರಿಶೀಲಿಸಿ, ಅವಧಿ ಮೀರಿದ ಮದ್ಯವನ್ನು ನಾಶಪಡಿಸಬೇಕು ಎಂಬ ನಿಯಮಾವಳಿ ಇದೆ. ಆದರೂ ಸಿಬ್ಬಂದಿ ಕೊರತೆಯ ನೆಪವೊಡ್ಡಿ ಮಾಲೂರಲ್ಲೇ ಕುಳಿತುಕೊಂಡು ಮಾಮೂಲಿ ಪಡೆದುಕೊಳ್ಳುತ್ತಿರುವುದು ಮಾಲೀಕರಿಗೆ ಅಕ್ರಮ ಎಸಗಲು ದಾರಿ ಮಾಡಿಕೊಟ್ಟಂತಾಗಿದೆ ಎಂಬುದು ಮದ್ಯಪ್ರಿಯರ ಆರೋಪವಾಗಿದೆ.
ಮಾಲೂರು ಇನ್ಸ್ಪೆಕ್ಟರ್ ಶಶಿಕಲಾ, ಸಬ್ ಇನ್ಸ್ಪೆಕ್ಟರ್ ನಾಗರಾಜ್ ಮತ್ತು ಬಾಲಕೃಷ್ಣ ವಿರುದ್ಧ ಕ್ರಮಕೈಗೊಳ್ಳುವ ಜತೆಗೆ ಅವಧಿ ಮುಗಿದ ಬಿಯರ್ ಮಾರಾಟ ಮಾಡಿದ ವೆಂಕಟ್ ಬಾರ್ ಅಂಡ್ ರೆಸ್ಟೋರೆಂಟ್ ಮುಚ್ಚಿಸಬೇಕೆಂದು ಜನತೆ ಆಗ್ರಹಿಸಿದ್ದಾರೆ.
























