ಕಾಂಗ್ರೆಸ್ ಕಾರ್ಯಕರ್ತನ ಸಾವಿನ ಬಳಿಕ ರಾಜಕೀಯ ಕಚ್ಚಾಟಕ್ಕೆ ತಿರುಗಿದ ಪ್ರಕರಣ
ಬೆಂಗಳೂರು: ಬ್ಯಾನರ್ ಅಳವಡಿಸುವ ವಿಚಾರದಲ್ಲಿ ನಡೆದ ಗಲಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವಿಗೀಡಾದ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಲ್ಲ ಪ್ರಕರಣಗಳನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡು ತೀವ್ರ ವಿವಾದ ಸೃಷ್ಟಿಸಿರುವ ಹಿನ್ನೆಲೆ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ.
ಬಳ್ಳಾರಿ ಪ್ರಕರಣ ಸಿಐಡಿಗೆ ವಹಿಸುವ ವಿಚಾರ ಸಂಬಂಧ ಇಂದೇ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಚರ್ಚೆ ಮಾಡ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ ನಿನ್ನೆ ಹೇಳಿದ್ದರು. ಆ ಬೆನ್ನಲ್ಲೇ ಆದೇಶ ಹೊರಬಿದ್ದಿದೆ. ಬ್ಯಾನರ್ ಗಲಾಟೆ ಪ್ರಕರಣದ ಕೇಸ್ ತನಿಖೆ ಸಿಐಡಿಗೆ ವಹಿಸುವ ವಿಚಾರ ಸಂಬಂಧ ಈ ಹಿಂದೆಯೂ ಗೃಹ ಸಚಿವ ಪರಮೇಶ್ವರ್ ಸುಳಿವು ನೀಡಿದ್ದರು.
ಪೊಲೀಸರ ಗನ್ ಹಾಗೂ ರಿವಾಲ್ವರ್ನಿಂದ ಫೈರಿಂಗ್ ಆಗಿಲ್ಲ, ಖಾಸಗಿ ಗನ್ನಿಂದ ಫೈರಿಂಗ್ ಆಗಿದ್ದೆಂದು ಎಡಿಜಿಪಿ ದೃಢಪಡಿಸಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ. ಹತ್ಯೆಗೆ ಪೆಟ್ರೋಲ್ ಬಾಂಬ್ ಬಳಕೆ ಮಾಡಿದ್ದಾರೆಂಬ ಆರೋಪವೂ ಇದ್ದು, ತನಿಖೆ ಆದಮೇಲೆ ಅದೆಲ್ಲ ಗೊತ್ತಾಗುತ್ತೆ. ಅಗತ್ಯಬಿದ್ದರೆ ಸಿಐಡಿಗೆ ಪ್ರಕರಣ ಕೊಡುತ್ತೇವೆ ಎಂದು ಹೇಳಿದ್ದರು.
ರಾಜಶೇಖರ್ ಸಾವಿಗೆ ಶಾಸಕ ನಾರಾ ಭರತ್ ರೆಡ್ಡಿ, ಸತೀಶ್ ರೆಡ್ಡಿಯೇ ನೇರ ಕಾರಣ, ಇಬ್ಬರನ್ನೂ ತಕ್ಷಣ ಬಂಧಿಸಬೇಕು ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಆಗ್ರಹಿಸಿದ್ದಾರೆ. ಮೊನ್ನೆಯಷ್ಟೇ ಎರಡು ಬಾರಿ ರಾಜಶೇಖರ್ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದಿದ್ದ ರೆಡ್ಡಿ ಈಗ ಅಂತ್ಯಕ್ರಿಯೆ ಸಂಬಂಧ ಇನ್ನೊಂದು ವಿಡಿಯೋ ರಿಲೀಸ್ ಮಾಡಿದ್ದಾರೆ. ಗಲಭೆಯಲ್ಲಿ ಮೃತಪಟ್ಟ ರಾಜಶೇಖರ್ ಅಂತ್ಯಕ್ರಿಯೆಯಲ್ಲಿ ಸಾಕ್ಷ್ಯನಾಶದ ಪ್ರಯತ್ನ ನಡೆದಿದೆ ಎಂದು ಆರೋಪಿಸಿ ಸಾಕ್ಷ್ಯಾಧಾರ ರಿಲೀಸ್ ಮಾಡಿದ್ದಾರೆ. ಮೊದಲು ಅಂತ್ಯಸಂಸ್ಕಾರಕ್ಕೆ ಗುಂಡಿ ತೋಡಿ ಬಳಿಕ ಸುಟ್ಟು ಹಾಕಿದ್ದಾರೆ. ಕಟ್ಟಿಗೆ ಬದಲು ಗ್ಯಾಸ್ನಿಂದ ಮೃತದೇಹ ಸುಟ್ಟಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ.
ಸ್ಮಶಾನದಲ್ಲಿ ಗುಂಡಿ ತೋಡುವ ಸೋಮ ಎಂಬ ವ್ಯಕ್ತಿಯ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಶಾಸಕ ಭರತ್ ರೆಡ್ಡಿ ಸೂಚನೆಯಂತೆಯೇ ಮೃತದೇಹವನ್ನು ಸುಡಲಾಗಿದೆ ಅಂತ ವಿಡಿಯೋ ಸಾಕ್ಷ್ಯ ನೀಡಿದ್ದಾರೆ. ಬಳ್ಳಾರಿ ಮೇಲೆ ಹಿಡಿತ ಸಾಧಿಸಲು ಮುಂದಾಗಿರುವ ಬಿಜೆಪಿ ಇದೇ 17ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಸಲು ಮುಂದಾಗಿದೆ.
























