ಕಾಂಗ್ರೆಸ್ಗೆ ವಿಪರೀತ ಮುಜುಗರ ಉಂಟು ಮಾಡಿದ್ದ ಸಮೀಕ್ಷೆ ವರದಿ
ಬೆಂಗಳೂರು: ಮತಯಂತ್ರಗಳ ಮೇಲೆ ಮತದಾರರಿಗೆ ಪೂರ್ಣ ವಿಶ್ವಾಸವಿದೆ ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರವೇ ನಡೆಸಿದ ಸಮೀಕ್ಷೆಯೊಂದರಲ್ಲಿ ಸ್ಪಷ್ಟವಾಗಿದೆ. ಈ ಸಮೀಕ್ಷೆ ಕಾಂಗ್ರೆಸ್ಗೆ ಇನ್ನಿಲ್ಲದ ಮುಜುಗರವುಂಟು ಮಾಡಿದ್ದು, ಇದೀಗ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ವೆಬ್ಸೈಟ್ನಿಂದ ಡಿಲೀಟ್ ಮಾಡಲಾಗಿದೆ. ಇವಿಎಂ ಮೇಲೆ ರಾಜ್ಯದ ಜನ ವಿಶ್ವಾಸ ಇಟ್ಟಿದ್ದಾರೆ ಎಂಬ ಅಂಶ ಈ ಸಮೀಕ್ಷೆಯಿಂದ ಬಯಲಾಗಿತ್ತು. ಇದು ಕಾಂಗ್ರೆಸ್ನ ಮತಚೋರಿ ಅಭಿಯಾನ ಹಾಗೂ ಇವಿಎಂ ವಿರುದ್ಧದ ಆರೋಪಗಳಿಗೆ ಭಾರಿ ಹಿನ್ನಡೆ ತಂದಿತ್ತು. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ವೆಬ್ಸೈಟ್ನಿಂದ ಸಮೀಕ್ಷೆ ಡಿಲೀಟ್ ಮಾಡಿಸಿದೆ.
ಸಮೀಕ್ಷೆ ಡಿಲೀಟ್ ಮಾಡಿದ ವಿಚಾರವನ್ನು ಬಿಜೆಪಿ ತೀಕ್ಷ್ಣವಾಗಿ ಟೀಕಿಸಿದೆ. ಬಿಜೆಪಿ ತನ್ನ ಎಕ್ಸ್ ಪುಟದಲ್ಲಿ, ಸಮೀಕ್ಷೆಯಿಂದ ಗಾಬರಿ ಬಿದ್ದು ಡಿಲೀಟ್ ಮಾಡಿಸಲಾಗಿದೆ. ಕುರ್ಚಿಗಾಗಿ ಸಮೀಕ್ಷೆ ಅಳಿಸಿ ಹಾಕಲಾಗಿದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯಗೆ ಈ ವರದಿ ಮುಖಭಂಗ ತಂದಿತ್ತು ಎಂದು ಟೀಕಿಸಿದೆ.
ಈ ಕುರಿತು ಮಾತಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕರ್ನಾಟಕ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಈ ಸರ್ವೆ ಮಾಡಿಸಿದೆ. ಈಗ ಸಿದ್ದರಾಮಯ್ಯ ಅವರಿಗೆ ನೆನಪಾಗಿದೆ, ಡಾ.ಬಾಲಸುಬ್ರಹ್ಮಣ್ಯಂ ಅವರು ಕೇಂದ್ರದ ಹುದ್ದೆಯಲ್ಲಿದ್ದಾರೆ ಅಂತ. ರಾಹುಲ್ ಗಾಂಧಿ ಗಾಳಿ ಸಿದ್ದರಾಮಯ್ಯಗೆ ಬೀಸುವುದು ಬೇಡ. 2024ಕ್ಕೂ ಮುಂಚಿನ ಎಕ್ಸಿಟ್ ಪೋಲ್ ಫಲಿತಾಂಶ ಬೋಗಸ್ ಅಂದಿದ್ದರು. ಮೊನ್ನೆ ಮಹಾರಾಷ್ಟ್ರದ ಎಕ್ಸಿಟ್ ಪೋಲ್ ಅವರ ಪರವಾಗಿ ಬಂದಾಗ ನಮ್ಮ ಪರ ಬಂದರೂ ಸೋಲಿಸಿದ್ದಾರೆ ಅಂದಿದ್ದರು. ಹಾಗೆ ಸಿದ್ದರಾಮಯ್ಯ ರಾಹುಲ್ ಅವರ ಹಾಗೆ ಮಾತನಾಡುತ್ತಿದ್ದಾರೆ ಅಂತ ಕಾಲೆಳೆದಿದ್ದಾರೆ.
ಪರಿಷತ್ ಸದಸ್ಯ ಎನ್ ರವಿಕುಮಾರ್ ಮಾತಾಡಿ, ಸಮೀಕ್ಷೆ ಕಾಂಗ್ರೆಸ್ಗೆ ಮುಜುಗರ ತಂದಿದೆ, ಹಾಗಾಗಿ ಡಿಲೀಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
























