ಕಾಂಗ್ರೆಸ್‌ ನಾಯಕನ ಗನ್‌ಮ್ಯಾನ್‌ ಬಂದೂಕಿನಿಂದ ಸಿಡಿದ ಗುಂಡಿನಿಂದ ರಾಜಶೇಖರ್‌ ಸಾವು

ಬಳ್ಳಾರಿ ಬ್ಯಾನರ್‌ ಗಲಾಟೆ ಸಂದರ್ಭದಲ್ಲಿ ಗುಂಡು ಹಾರಿಸಿದ್ದ ಸತೀಶ್‌ ರೆಡ್ಡಿಯ ಗನ್‌ಮ್ಯಾನ್‌ಗಳು

ಬಳ್ಳಾರಿ : ಬ್ಯಾನರ್​​ ಅಳವಡಿಕೆ ವಿಚಾರವಾಗಿ ಶಾಸಕರಾದ ಜನಾರ್ದನ ರೆಡ್ಡಿ ಮತ್ತು ಭರತ್​​ ರೆಡ್ಡಿ ಬೆಂಬಲಿಗರ ಮಾರಾಮಾರಿ ವೇಳೆ ಬುಲೆಟ್​​ ತಗುಲಿ ಮೃತಪಟ್ಟಿದ್ದ ಕಾಂಗ್ರೆಸ್​​ ಕಾರ್ಯಕರ್ತನ ಸಾವಿನ ಕೇಸ್​​ಗೆ ಸ್ಫೋಟಕ ತಿರುವು ಸಿಕ್ಕಿದೆ. ಸತೀಶ್ ರೆಡ್ಡಿ ಗನ್‌ಮ್ಯಾನ್ ಫೈರ್​​ ಮಾಡಿದ್ದ ಬಂದೂಕಿನ ಬುಲೆಟ್​​ ತಗುಲಿ ಯುವಕ ರಾಜಶೇಖರ್​​ ಮೃತಪಟ್ಟಿದ್ದಾರೆ ಎಂಬುದು ದೃಢಪಟ್ಟಿದೆ ಎನ್ನಲಾಗಿದೆ.

12 ಎಂಎಂ ಬುಲೆಟ್​​ನಿಂದ ರಾಜಶೇಖರ್​​ ಜೀವ ಹೋಗಿದ್ದು, ಸತೀಶ್ ರೆಡ್ಡಿ ಖಾಸಗಿ ಗನ್​​ಮ್ಯಾನ್ ಬಳಸಿರುವುದು ಇದೇ ಗನ್​​ ಆಗಿದೆ. ಪ್ರಕರಣ ಸಂಬಂಧ ಈಗಾಗಲೇ 5 ಗನ್​​ಗಳನ್ನು ಬ್ರೂಸ್‌ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ. ಓರ್ವ ಗನ್​​ಮ್ಯಾನ್​​ನನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದ ನಾಲ್ವರು ಎಸ್ಕೇಪ್​​ ಆಗಿದ್ದಾರೆ.





















































 
 

ಗಲಾಟೆ ಸಂಬಂಧ ಎರಡೂ ಗುಂಪುಗಳ ಮೇಲೂ ಪೊಲೀಸರು FIR ದಾಖಲಿಸಿಕೊಂಡಿದ್ದು, 50ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಿದ್ದಾರೆ. ಇಂದು ಮಧ್ಯಾಹ್ನದ ಒಳಗೆ ಪ್ರಮುಖ ಆರೋಪಿಗಳು ಸೇರಿ ಹಲವರ ಬಂಧನ ಸಾಧ್ಯತೆ ಇದೆ. ಗಲಾಟೆ ಸಂದರ್ಭ ಸ್ಥಳದಲ್ಲಿದ್ದ ಶಾಸಕ ಭರತ್​​ ರೆಡ್ಡಿ ಆಪ್ತ ಸತೀಶ್ ರೆಡ್ಡಿಯೂ ಅರೆಸ್ಟ್​​ ಆಗಬಹುದು ಎನ್ನಲಾಗಿದೆ. ಸತೀಶ್ ರೆಡ್ಡಿ ಸ್ಥಳಕ್ಕೆ ಬಂದ ನಂತರವೇ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಸತೀಶ್ ರೆಡ್ಡಿ ಮೇಲೆ ಹಲ್ಲೆಗೆ ಜನಾರ್ದನ್ ರೆಡ್ಡಿ ಕಡೆಯವರು ಮುಂದಾಗಿದ್ದರು. ಈ ವೇಳೆ ಸತೀಶ್​​ ರೆಡ್ಡಿ ಖಾಸಗಿ ಗನ್​​ಮ್ಯಾನ್​ಗಳು ಫೈರಿಂಗ್​ ಮಾಡಿದ್ದರು. ಪ್ರಕರಣ ಸಂಬಂಧ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಗಲಾಟೆಗೆ ಸಂಬಂಧಿಸಿದಂತೆ ಒಟ್ಟಾರೆ 6 ಪ್ರಕರಣಗಳು ಈ ವರೆಗೆ ದಾಖಲಾಗಿವೆ.

ಬಳ್ಳಾರಿ ಗಲಾಟೆ ಬೆನ್ನಲ್ಲೇ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಝಡ್ ಶ್ರೇಣಿಯ ಭದ್ರತೆ ಒದಗಿಸಬೇಕು ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಆಗ್ರಹಿಸಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಡಿಜಿಪಿ ಡಾ. ಎಂ.ಎ.ಸಲೀಂ ಅವರಿಗೆ ಪತ್ರ ಬರೆದು ಶಾಸಕರು ಆಗ್ರಹಿಸಿದ್ದಾರೆ. ಶಾಸಕ ನಾರಾ ಭರತ್ ‌ರೆಡ್ಡಿ ಮತ್ತು ಸತೀಶ್ ರೆಡ್ಡಿಯನ್ನು ಬಂಧಿಸಬೇಕು. ಘಟನೆಯನ್ನು ನಿಭಾಯಿಸದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು. ಭದ್ರತೆ ನೀಡದೆ ಇದ್ದರೆ ಮುಂದೆ ನನ್ನ ಮತ್ತು ಕುಟುಂಬದ ಮೇಲೆ ದಾಳಿ ನಡೆದರೆ ರಾಜ್ಯ ಸರ್ಕಾರವೇ ಹೊಣೆ ಎಂದು ಜನಾರ್ದನ ರೆಡ್ಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

error: Content is protected !!
Scroll to Top