ಹರಿದು ಬರುತ್ತಿರುವ ಭಕ್ತ ಸಾಗರ ; 332.77 ಕೋ. ರೂ. ಆದಾಯ ಸಂಗ್ರಹ
ಶಬರಿಮಲೆ : ಶಬರಿಮಲೆಯ ಈ ಯಾತ್ರಾ ಋತುವಿನ ಮಂಡಲ ಪೂಜೆ ಶನಿವಾರ ಸಂಪನ್ನಗೊಂಡಿತು. ಶನಿವಾರ ಬೆಳಗ್ಗೆ 10.10ರಿಂದ 11.30ರ ತನಕ ಮಂಡಲ ಪೂಜೆ ವಿಧಿಪೂರ್ವಕ ನೆರವೇರಿತು. ಸಂಪ್ರದಾಯದಂತೆ ರಾತ್ರಿ 10ಕ್ಕೆ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ಕೆಲವು ದಿನಗಳ ಮಟ್ಟಿಗೆ ಮುಚ್ಚಲಾಗಿದೆ.
ಮುಂದಿನ ಹಂತವಾದ ಮಕರ ವಿಳಕ್ಕು ದರ್ಶನ ಯಾತ್ರೆಗಾಗಿ ಜ.30ರಂದು ಗರ್ಭಗುಡಿಯ ಬಾಗಿಲು ಮತ್ತೆ ತೆರೆಯಲಿದೆ. ನಂತರ ಮಕರ ಸಂಕ್ರಮಣದ ತನಕ ಅಯ್ಯಪ್ಪ ದರ್ಶನ ಮುಂದುವರಿಯಲಿದೆ. ಮಕರ ಜ್ಯೋತಿ ದರ್ಶನವಾದ ಬಳಿಕ ಕೆಲವು ದಿನ ಅಯ್ಯಪ್ಪ ದರ್ಶನಕ್ಕೆ ಅವಕಾಶವಿದೆ.
ಮಂಡಲ ಯಾತ್ರೆ ಋತುವಿನಲ್ಲಿ ಸುಮಾರು 31 ಲಕ್ಷ ಭಕ್ತರು ಈಗಾಗಲೇ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಈಗಾಗಲೇ 332.77 ಕೋ. ರೂ. ಆದಾಯ ಹರಿದುಬಂದಿದೆ ಎಂದು ತಿರುವಾಂಕೂರು ದೇವಸ್ವಂ ಬೋರ್ಡ್ ಮೂಲಗಳು ತಿಳಿಸಿವೆ. ಈ ಸಲ ಆದಾಯದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಶನಿವಾರ ಮಧ್ಯಾಹ್ನಕ್ಕಾಗುವಾಗ 30,56,871 ಭಕ್ತರು ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಪ್ರತಿವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.
ಶನಿವಾರ ಮಂಡಲ ಪೂಜೆಗಾಗಿ ಭಕ್ತ ಸಾಗರ ಹರಿದುಬಂದಿದ್ದು, ಇದರೊಂದಿಗೆ 41 ದಿನಗಳ ಅಯ್ಯಪ್ಪ ಯಾತ್ರ ಋತುವಿನ ಒಂದು ಹಂತ ಯಾವುದೇ ಗೊಂದಲವಿಲ್ಲದೆ ಯಶ್ವಿಯಾಗಿ ಸಂಪನ್ನಗೊಂಡಂತಾಗಿದೆ.
























