ಸೋನಿಯಾ ಗಾಂಧಿಗೆ ಉಡುಗೊರೆ ಕೊಡುವ ಫೋಟೊ ಹಂಚಿಕೊಂಡು ಆರೋಪ ಮಾಡಿದ ಸಿಎಂ
ತಿರುವನಂತಪುರಂ: ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೊಟ್ಟಿ ಮತ್ತು ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಂಟಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಪಿಣರಾಯಿ ವಿಜಯನ್, ಕೇರಳದ ಮಾಜಿ ಮುಖ್ಯಮಂತ್ರಿ ಕರುಣಾಕರನ್, ಹಿಮಂತ ಬಿಸ್ವಾ ಶರ್ಮಾ ಅವರಿಗೆ ಸೋನಿಯಾ ಗಾಂಧಿ ಅಪಾಯಿಂಟ್ಮೆಂಟ್ ಸಿಕ್ಕಿರಲಿಲ್ಲ. ಆದರೆ ಉಣ್ಣಿಕೃಷ್ಣನ್ ಪೊಟ್ಟಿಗೆ ಅಪಾಯಿಂಟ್ಮೆಂಟ್ ಸಿಕ್ಕಿದೆ. ಸೋನಿಯಾ ಹೆಚ್ಚಿನ ಭದ್ರತೆಯಿರುವ ನಾಯಕಿ. ಆರೋಪಿಗೆ ಹೇಗೆ ಅವರ ಭೇಟಿ ಸಾಧ್ಯವಾಯಿತು ಎಂದು ಪ್ರಶ್ನಿಸಿ ಸೋನಿಯಾ ಅವರು ಉಣ್ಣಿಕೃಷ್ಣನ್ ಪೊಟ್ಟಿ, ಗೋವರ್ಧನ್ರಿಂದ ಉಡುಗೊರೆ ಸ್ವೀಕರಿಸುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕರಿಗೂ ಗೊತ್ತು ಅವರ ಭೇಟಿ ಎಷ್ಟು ಕಷ್ಟ ಎನ್ನುವುದು. ಹಾಗಿದ್ದರೆ ಆರೋಪಿಗೆ ಹೇಗೆ ಸಿಕ್ಕಿತು ಅವರ ಭೇಟಿ ಅವಕಾಶ? ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಶಬರಿಮಲೆ ಚಿನ್ನದ ಅವ್ಯವಹಾರದ ತನಿಖೆಯನ್ನು ರಾಜ್ಯ ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದ ಕಾಂಗ್ರೆಸ್ ಮತ್ತು ಯುಡಿಎಫ್ಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟದ ಭಾಗವಾಗಿರುವ ಸಿಪಿಎಂನ ಮುಖ್ಯಮಂತ್ರಿಯೇ ಸೋನಿಯಾ ಗಾಂಧಿ ವಿರುದ್ಧ ಆರೋಪ ಹೊರಿಸಿರುವುದು ರಾಷ್ಟ್ರವ್ಯಾಪಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಈಗಾಗಲೇ ಇಂಡಿ ಒಕ್ಕೂಟದ ಹಲವು ಪಕ್ಷಗಳು ಕಾಂಗ್ರೆಸ್ ವಿರುದ್ಧ ನಿಲುವು ತಳೆದಿದ್ದು, ಈಗ ಸಿಪಿಎಂ ಕೂಡ ಗಂಭೀರ ಆರೋಪ ಮಾಡಿದೆ.
ಕರ್ನಟಕ ಬಿಜೆಪಿ ಪಿಣರಾಯಿ ವಿಜಯನ್ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೇಲೆ ಸರಣಿ ಆರೋಪಗಳನ್ನು ಮಾಡಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಂಥವರೇ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲು ಅವರ ಮನೆಯ ಗೇಟಿನ ಮುಂದೆ ತಾಸುಗಟ್ಟಲೆ ಕಾದು ನಿಲ್ಲಬೇಕಾಗುತ್ತದೆ. ಆದರೆ ಚಿನ್ನ ಕಳ್ಳತನದ ಆರೋಪಿಗಳಿಗೆ ಸೋನಿಯಾ ಭೇಟಿ ಅಷ್ಟು ಸುಲಭದಲ್ಲಿ ಸಾಧ್ಯವಾದದ್ದು ಹೇಗೆ ಎಂದು ಬಿಜೆಪಿ ಪ್ರಶ್ನಿಸಿದೆ.
























