ಬೆಂಗಳೂರು: ವಿವಾಹವಾಗಿ ಕೇವಲ 27 ದಿನಗಳಲ್ಲೇ ನವವಿವಾಹಿತೆ ನಿಗೂಢವಾಗಿ ಮೃತಪಟ್ಟ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಐಶ್ವರ್ಯ (26) ಎಂದು ಗುರುತಿಸಲಾಗಿದೆ.
ಐಶ್ವರ್ಯಳನ್ನು ಆಕೆಯ ಪತಿಯೇ ಕೊಲೆ ಮಾಡಿರುವುದಾಗಿ ಆಕೆಯ ಪೋಷಕರು ಆರೋಪಿಸಿದ್ದಾರೆ. ಆಕೆಯನ್ನು ಲಿಖಿತ್ ಸಿಂಹ ಎಂಬಾತ ವಿವಾಹವಾಗಿದ್ದ. ಮದುವೆಯಾಗಿ ಒಂದು ತಿಂಗಳು ಸಹ ಕಳೆದಿಲ್ಲ. ಆಗಲೇ ಆಕೆಗೆ ಪತಿಯ ಮನೆಯಲ್ಲಿ ಕಿರುಕುಳ ಆರಂಭವಾಗಿತ್ತು. ಈ ವಿಷಯದಲ್ಲೇ ಕುಟುಂಬಸ್ಥರು ರಾಜಿ ಪಂಚಾಯ್ತಿ ನಡೆಸಿದ್ದರು. ಈ ಘಟನೆ ನಡೆದ ಸಂಜೆಯೇ ಐಶ್ವರ್ಯ ಮೇಲೆ ಪತಿಯ ಮನೆಯಲ್ಲಿ ಹಿಂಸೆ ನಡೆದಿತ್ತು ಎಂಬ ಆರೋಪ ಸಹ ಕೇಳಿ ಬಂದಿದೆ.
ಸಂಜೆ ವೇಳೆ ಐಶ್ವರ್ಯ ಹೆತ್ತವರಿಗೆ ಲಿಖಿತ್ ಕರೆ ಮಾಡಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾನೆ. ಅವರು ಮನೆಗೆ ಬಂದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಮೃತ ದೇಹ ಪತ್ತೆಯಾಗಿದೆ. ಆದರೆ ಬಾಗಿಲು ಒಡೆಯದ ಕಾರಣ ಆಕೆಯ ಪತಿಯೇ ಅವಳನ್ನು ಕೊಲೆ ಮಾಡಿರುವ ಸಂದೇಹ ಐಶ್ವರ್ಯ ಪೋಷಕರಿಗೆ ಬಂದಿದೆ.
ಆರೋಪಿ ಸ್ಥಾನದಲ್ಲಿರುವ ಲಿಖಿತ್ನನ್ನು ಬಾಗಲಕುಂಟೆ ಪೊಲೀಸರು ಬಂಧಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾಗಿದೆ.
























