ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಕಾಯ್ದೆ ರಚನೆ ಎಂದು ಸಮರ್ಥನೆ
ಬೆಂಗಳೂರು: ಬಿಜೆಪಿ ದ್ವೇಷಪೂರಿತ ಮತ್ತು ಪ್ರಚೋದನಕಾರಿ ಭಾಷಣಗಳಲ್ಲಿ ಭಾಗಿಯಾಗಿದೆ. ಹೀಗಾಗಿ ವಿಧಾನಸಭೆ ಅಂಗೀಕರಿಸಿದ ದ್ವೇಷ ಭಾಷಣ ಕಾಯ್ದೆಯನ್ನು ವಿರೋಧಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೆಟು ನೀಡಿದ್ದಾರೆ. ಸಮಾಜದಲ್ಲಿ ಶಾಂತಿ ಮತ್ತು ಸಹೋದರತ್ವವನ್ನು ಕಾಪಾಡಿಕೊಳ್ಳಲು ಮತ್ತು ದ್ವೇಷ ಭಾಷಣಗಳನ್ನು ಕೊನೆಗೊಳಿಸಲು ಸರ್ಕಾರ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ) ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಡಿಸೆಂಬರ್ 19ರಂದು ಮುಕ್ತಾಯಗೊಂಡ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ, ಬಿಜೆಪಿ ಮತ್ತು ಜೆಡಿಎಸ್ನ ತೀವ್ರ ವಿರೋಧದ ನಡುವೆಯೂ ರಾಜ್ಯ ವಿಧಾನಮಂಡಲದ ಎರಡೂ ಸದನಗಳು ಈ ಮಸೂದೆಯನ್ನು ಅಂಗೀಕರಿಸಿವೆ. ಮಸೂದೆಯು ಕಾನೂನಾಗಲು ಈಗ ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಲಾಗುತ್ತದೆ.
ಮಸೂದೆಯನ್ನು ‘ಕಠಿಣ, ವಾಕ್ ಸ್ವಾತಂತ್ರ್ಯದ ಮೇಲಿನ ನೇರ ದಾಳಿ ಮತ್ತು ರಾಜಕೀಯ ಸೇಡಿಗೆ ಅಪಾಯಕಾರಿ ಸಾಧನ’ ಎಂದು ಕರೆದಿರುವ ಬಿಜೆಪಿ, ಮಸೂದೆಗೆ ಒಪ್ಪಿಗೆ ನೀಡದಂತೆ ಕರ್ನಾಟಕ ರಾಜ್ಯಪಾಲರಿಗೆ ಪತ್ರ ಬರೆದಿದೆ.
ದ್ವೇಷಪೂರಿತ ಮತ್ತು ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ (ಮಸೂದೆಯನ್ನು) ವಿರೋಧಿಸುತ್ತಾರೆ. ನೀವು ಅಂತಹ ಭಾಷಣಗಳನ್ನು ಮಾಡದಿದ್ದರೆ, ಕೆಲವರು ನಿಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದು ಏಕೆ? ಬಿಜೆಪಿ ಏಕೆ ಚಿಂತಿತವಾಗಿದೆ. ಪ್ರಸ್ತಾವಿತ ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ, ಅವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಥವಾ ಯಾವುದೇ ಪಕ್ಷದವರಾಗಿರಲಿ ಎಂದು ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು.
‘ನೀವು (ಬಿಜೆಪಿ) ಏಕೆ ವಿರೋಧಿಸುತ್ತಿದ್ದೀರಿ? ದ್ವೇಷ ಭಾಷಣಗಳಿದ್ದರೆ ಸಮಾಜದಲ್ಲಿ ಶಾಂತಿ ಇರುತ್ತದೆಯೇ? ಸಮಾಜದಲ್ಲಿ ಶಾಂತಿ ಮತ್ತು ಸಹೋದರತ್ವವನ್ನು ಕಾಪಾಡಿಕೊಳ್ಳಲು, ಈ ಮಸೂದೆಯನ್ನು ತರಲಾಗಿದೆ. ಇತ್ತೀಚಿನ ದಿನಗಳಲ್ಲಿ ದ್ವೇಷ ಭಾಷಣಗಳು ಹೆಚ್ಚಾಗಿವೆ, ಆದ್ದರಿಂದ ಅವುಗಳನ್ನು ನಿಷೇಧಿಸಲು ನಾವು ಈ ಕ್ರಮವನ್ನು ತೆಗೆದುಕೊಂಡಿದ್ದೇವೆ’ ಎಂದು ಹೇಳಿದರು.
























