ಚಿನ್ನಯ್ಯನ ಮೂಲಕ ದೊಡ್ಡಮಟ್ಟದಲ್ಲಿ ಪಿತೂರಿ ನಡೆಯುತ್ತಿದೆ ಎಂದು ದೂರು
ಬೆಂಗಳೂರು: ಬುರುಡೆ ಗ್ಯಾಂಗ್ ವಿರುದ್ಧ ಚಿನ್ನಯ್ಯ ದೂರು ನೀಡಿದ ಬೆನ್ನಲ್ಲೇ ಚಿನ್ನಯ್ಯನಿಗೆ ಗನ್ಮ್ಯಾನ್ ರಕ್ಷಣೆ ನೀಡುವಂತೆ ಜಯಂತ್ ಟಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾನವಿ ಮಾಡಿದ್ದಾರೆ.
ಚಿನ್ನಯ್ಯನನ್ನು ಬಳಸಿಕೊಂಡು ದೊಡ್ಡ ಪಿತೂರಿ ನಡೆಯತ್ತಿದೆ. ಹೀಗಾಗಿ ಚಿನ್ನಯ್ಯನಿಗೆ ಕೂಡಲೇ ಗನ್ ಮ್ಯಾನ್ ಒದಗಿಸಬೇಕು ಮತ್ತು ಆತನ ಕುಟುಂಬಕ್ಕೂ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕೆಂದು ವಿಶೇಷ ತನಿಖಾ ತಂಡ ಸಲ್ಲಿಸಿದ್ದ ಪ್ರಾಥಮಿಕ ತನಿಖಾ ವರದಿಯಲ್ಲಿ ಆರನೇ ಆರೋಪಿಯಾಗಿರುವ ಜಯಂತ್ಗೆ ಮನವಿ ಮಾಡಿದ್ದಾರೆ.
ಚಿನ್ನಯ್ಯ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಪಡೆದು ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟನವರ್, ಜಯಂತ್ ಟಿ, ವಿಠಲ್ ಗೌಡ ಹಾಗೂ ಸಮೀರ್ ಇವರಿಂದ ಜೀವ ಬೆದರಿಕೆಯಿದೆ. ಅದುದರಿಂದ ನನಗೆ ಸೂಕ್ತ ರಕ್ಷಣೆ ನೀಡಬೇಕೆಂದು ದೂರಿನ ಮುಖಾಂತರ ಮನವಿ ಮಾಡಿಕೊಂಡಿರುವ ವಿಚಾರ ಮಾಧ್ಯಮದ ಮೂಲಕ ಗೊತ್ತಾಯಿತು.
ಆರಂಭದ ಹಂತದಲ್ಲಿ ಚಿನ್ನಯ್ಯನ ಜೊತೆ ನನಗೆ ಮಾತುಕತೆಯಿದ್ದು, ಆ ನಂತರದ ದಿನಗಳಿಂದ ಇವನಿಂದ ನಮಗೆ ಯಾವುದೇ ರೀತಿಯಲ್ಲಿ ಸಂಪರ್ಕ ನನಗೆ ಇರುವುದಿಲ್ಲ ಹಾಗೂ ಮುಂದಿನ ದಿನಗಳಲ್ಲಿ ಚಿನ್ನಯ್ಯನಿಗೆ ಯಾವುದೇ ರೀತಿಯಲ್ಲಿ ಬೆದರಿಕೆ ಹಾಕುವ ಉದ್ದೇಶ ನನಗೆ ಇರುವುದಿಲ್ಲ. ಹಾಗೆಯೇ ಸಮೀರ್ ಕ್ರಿಮಿನಲ್ ದೂರು ಕೊಟ್ಟು ಪ್ರಕರಣವನ್ನು ಹಿಂದೂ-ಮುಸ್ಲಿಂ ಮತೀಯ ವಿಚಾರವಾಗಿ ಪರಿವರ್ತನೆಗೊಳಿಸುವ ಹುನ್ನಾರ ಎದ್ದು ಕಾಣುತ್ತಿದೆ.
ಚಿನ್ನಯ್ಯನಿಗೆ ಯಾರಿಂದಲಾದರೂ ಅಪಾಯ ಉಂಟು ಮಾಡಿ, ಅದನ್ನು ಹೋರಾಟಗಾರರಾದ ನಮ್ಮ ಮೇಲೆ ಹಾಕಿ, ಆ ಮೂಲಕ ಅನ್ಯಾಯವಾಗಿ ನಮ್ಮನ್ನು ಜೈಲಲ್ಲಿ ಇರಿಸಿ ಸಾಕ್ಷಿ ನಾಶ ಮಾಡಲು ಹಾಗೂ ಪ್ರಕರಣದ ತನಿಖೆಯನ್ನು ಬೇರೆ ದಿಕ್ಕಿಗೆ ತಿರುಗಿಸಲು, ದೊಡ್ಡಮಟ್ಟದಲ್ಲಿ ಪಿತೂರಿ ನಡೆಯುತ್ತಿರುವುದರಿಂದ ದೂರುದಾರ ಚಿನ್ನಯ್ಯ ನೀಡಿರುವ ದೂರಿನ ಉದ್ದೇಶ ಹಾಗೂ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಹಾಗೆಯೇ ದೂರು ನೀಡಲು ಇವರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಒತ್ತಡ ಹಾಕಿ ಪಿತೂರಿ ನಡೆಸಿದವರ ಬಗ್ಗೆ ತನಿಖೆ ನಡೆಸಬೇಕೆಂದು ಈ ಮೂಲಕ ಮನವಿ ಮಾಡುತ್ತಿದ್ದೇನೆ ಎಂದು ಜಯಂತ ಮನವಿಯಲ್ಲಿ ಹೇಳಿದ್ದಾರೆ.
























