ಎರಡು ತಿಂಗಳ ಹಣ ಜಮೆ ಮಾಡದೆ ಮೋಸ ಮಾಡಿದ್ದಾರೆ ಎಂದು ವಿಪಕ್ಷಗಳ ಆರೋಪ
ಬೆಳಗಾವಿ: ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿಯಂತೆ ಸಿಗುವ ಗೃಹಲಕ್ಷ್ಮಿ ಹಣದಲ್ಲಿ ಭಾರಿ ಗೋಲ್ಮಾಲ್ ನಡೆದಿರುವ ಆರೋಪ ಕೇಳಿಬಂದು ಸರ್ಕಾರ ಭಾರಿ ಮುಜುಗರ ಅನುಭವಿಸುತ್ತಿದೆ. ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನು ನುಂಗಿ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸುಮಾರು 5,500 ಕೋ. ರೂ.ಯುಷ್ಟು ಹಣ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ ಎನ್ನುವ ವಿಚಾರವನ್ನು ಅಧಿವೇಶನದಲ್ಲೇ ವಿಪಕ್ಷಗಳು ಬಯಲೆಗೆಳೆದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಇದಾದ ಬಳಿಕ ನಿನ್ನೆಯ ಕಲಾಪದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಣ ಬಾಕಿ ಇರುವುದನ್ನು ಕೊನೆಗೂ ಒಪ್ಪಿಕೊಂಡಿದ್ದಾರೆ. ಗೃಹಲಕ್ಷ್ಮಿ ಹಣ 2 ತಿಂಗಳ ಹಣ ಬಾಕಿಯಿದೆ. ನನ್ನ ಮಾತಿನಿಂದ ತಪ್ಪಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಗೃಹಲಕ್ಷ್ಮಿ ನುಂಗಿ ಹಾಕಿರುವ ಬಗ್ಗೆ ಭಾರಿ ಅಭಿಯಾನ ನಡೆಯುತ್ತಿದೆ. ಸುಮಾರು 5,500 ಕೋ. ರೂ. ಯಾರ ಜೇಬಿಗೆ ಹೋಗಿದೆ, ಯಾವ ಚುನಾವಣೆಗೆ ಬಳಕೆಯಾಗಿದೆ, ಯಾರಿಗೆ ಕಪ್ಪ ಸಂದಾಯವಾಗಿದೆ ಎಂದು ಬಿಜೆಪಿ ಸರಣಿ ಪ್ರಶ್ನೆಗಳನ್ನು ಕೇಳಿ ಸರ್ಕಾರದ ಮೇಲೆ ಮುಗಿಬಿದ್ದಿದೆ.
2024-2025ನೇ ಆರ್ಥಿಕ ವರ್ಷದಲ್ಲಿ 2 ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡದೇ ಗೋಲ್ಮಾಲ್ ಆಗಿರುವ ಅನುಮಾನ ಎದ್ದಿದ್ದು, ಹಣ ಬಿಡುಗಡೆ ಆಗದೆ ಇರುವುದಕ್ಕೆ ಆರ್ಥಿಕ ಇಲಾಖೆ ಕಾರಣ ಅಂತ ಆರ್ಥಿಕ ಇಲಾಖೆ ಮೇಲೆ ಗೂಬೆ ಕೂರಿಸುತ್ತಾ ಇತ್ತು.
ಮೊದಲಿಗೆ ಒಟ್ಟು 23 ಕಂತುಗಳ 46 ಸಾವಿರ ರೂ.ಪಾಯಿಗಳನ್ನು 1.26 ಕೋಟಿ ಮಹಿಳೆಯರ ಖಾತೆಗಳಿಗೆ ಡಿಬಿಟಿ ಮೂಲಕ ಜಮೆ ಮಾಡಿದ್ದೇವೆ. ನಾನು ಸದನದಲ್ಲಿ ಹೇಳಿದ ಹೇಳಿಕೆಗೆ ಈಗಲೂ ಬದ್ಧ. ಕಳೆದ ಆಗಸ್ಟ್ ತಿಂಗಳವರೆಗಿನ ಹಣ ಜಮೆ ಆಗಿದೆ ಅಂತ ಹೇಳಿದ್ದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಬಳಿಕ ಸದನದಲ್ಲೂ ಉತ್ತರ ನೀಡಿದ ಸಚಿವೆ, ರಾಜ್ಯದಲ್ಲಿ ಈ ಯೋಜನೆ ಮೊದಲು ಬಂತು. ಅತ್ಯಂತ ಭಕ್ತಿ ಭಾವದಿಂದ ಈ ಪುಣ್ಯದ ಕೆಲಸ ಮಾಡ್ತಿದೀವಿ. ಇದು ದೇಶಕ್ಕೆ ಮಾದರಿ ಆಗಿದೆ. ಈವರೆಗೆ 23 ಕಂತುಗಳ ಹಣವನ್ನ ಹಾಕಲಾಗಿದೆ. ಆದ್ರೆ ಪದೇಪದೆ ಫೆಬ್ರವರಿ ಮಾರ್ಚ್ದು ಕೇಳ್ತಿದ್ರು, ನನ್ನ ಪ್ರಕಾರ ಕೊಟ್ಟಿದ್ದೀವಿ ಅಂದುಕೊಂಡಿದ್ದೆ. ಆದರೆ ಮತ್ತೆ ಪರಿಶೀಲನೆ ಮಾಡಿದಾಗ 2 ತಿಂಗಳ ಹಣ ಬಾಕಿ ಇರೋದು ಕಂಡುಬಂದಿದೆ. ಯಾಕೆ ವ್ಯತ್ಯಯ ಆಗಿದೆ ಎನ್ನುವುದನ್ನ ಪರಿಶೀಲನೆ ಮಾಡ್ತೀವಿ. ಮುಂದಿನ ದಿನಗಳಲ್ಲಿ ಪರಿಶೀಲಿಸಿದ್ತೀವಿ, ನನ್ನ ಮಾತಿನಿಂದ ತಪ್ಪಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಅಂತ ಹೇಳಿದ್ದಾರೆ.
ಮುಖ್ಯಮಂತ್ರಿಗಳು ಈಗಾಗಲೇ ಸದನದಲ್ಲಿ ಈ ವಿಷಯವನ್ನು ಆದಷ್ಟು ಶೀಘ್ರದಲ್ಲಿ ಪರಿಹರಿಸುವುದಾಗಿ ಹೇಳಿದ್ದಾರೆ. ಹಣವನ್ನು ಬೇರೆ ಕಡೆಗೆ ವರ್ಗಾಯಿಸಲಾಗಿಲ್ಲ ಅಥವಾ ಯಾವುದೇ ದುರುಪಯೋಗವಾಗಿಲ್ಲ ಎಂದು ಸಚಿವೆ ಸ್ಪಷ್ಟಪಡಿಸಿದರು. ಎರಡು ತಿಂಗಳ ಹಣ ಪಾವತಿಯಲ್ಲಿ ವ್ಯತ್ಯಯವಾಗಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸುವುದಾಗಿ ತಿಳಿಸಿದರು. ತಮ್ಮ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಲಕ್ಷ್ಮೀ ಹೇಳಿದರು.
























