ಬೆಂಗಳೂರು: ಪೊಲೀಸ್ ಇನ್ಸ್ಪೆಕ್ಟರ್ ಓರ್ವರಿಗೆ ಮಹಿಳೆಯೊಬ್ಬಳು ರಕ್ತದಲ್ಲಿ ಪತ್ರ ಬರೆದು, ಕಜ್ಜಾಯದ ಡಬ್ಬ, ಬೊಕ್ಕೆ ಹಾಗೂ ಎರಡು ಶೀಟ್ ಮಾತ್ರೆಗಳನ್ನು ಅವರ ಟೇಬಲ್ ಮೇಲಿರಿಸಿ ತನ್ನನ್ನು ಪ್ರೀತಿ ಮಾಡುವಂತೆ ಪೀಡಿಸಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಅದೇ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಎಂಬವರಿಗೆ ಅದೇ ನಗರದ ನಿವಾಸಿ ವನಜಾ ಎಂಬಾಕೆ ಪ್ರೀತಿ ಮಾಡುವಂತೆ ಪೀಡಿಸಿ, ಬೆದರಿಕೆ ಹಾಕಿರುವುದಾಗಿದೆ.
ಮೆಸೇಜ್ ಮೂಲಕ ನಿರಂತರವಾಗಿ ಈಕೆ ತನ್ನನ್ನು ಪ್ರೀತಿ ಮಾಡುವಂತೆ ಸತೀಶ್ ಅವರ ಬೆನ್ನು ಬಿದ್ದಿದ್ದಾಳೆ. ಸತೀಶ್ ಅವರು ಆಕೆಯ ನಂಬರ್ ಅನ್ನು ಬ್ಲಾಕ್ ಮಾಡಿದ್ದರೂ ಬೇರೆ ಬೇರೆ ನಂಬರ್ನಿಂದ ಪೀಡಿಸುತ್ತಿದ್ದಳು. ಅದಾದ ಬಳಿಕ ಈಗ ತನ್ನ ರಕ್ತದಲ್ಲೇ ಪತ್ರ ಬರೆದು ಸತೀಶ್ ಅವರ ಟೇಬಲ್ ಮೇಲೆ ಇಟ್ಟು ಹೋಗಿದ್ದು ‘ಐ ಲವ್ ಯೂ, ಯೂ ಮಸ್ಟ್ ಲವ್ ಮಿ’ ಎಂದಿದ್ದಾಳೆ. ಪ್ರೀತಿ ಒಪ್ಪಿಕೊಳ್ಳದೇ ಹೋದಲ್ಲಿ ಆತ್ಮಹತ್ಯೆಯ ಬೆದರಿಕೆ ಸಹ ಒಡ್ಡಿದ್ದಾಳೆ. ನನ್ನ ಸಾವಿಗೆ ನೀವೇ ಕಾರಣ ಎಂದೂ ಹೇಳಿದ್ದಾಳೆ.
ಆಕೆಯ ಕಿರುಕುಳಕ್ಕೆ ಬೇಸತ್ತ ಸತೀಶ್ ಆಕೆಯ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಕರ್ತವ್ಯಕ್ಕೆ ಅಡ್ಡಿ ಮತ್ತು ಆತ್ಮಹತ್ಯೆ ಬೆದರಿಕೆಯಡಿ ಆಕೆಯ ವಿರುದ್ಧ ರಾಮಮೂರ್ತಿನಗರ ಠಾಣೆಯಲ್ಲೇ FIR ದಾಖಲಾಗಿದೆ.
























