ತಳ್ಳುಗಾಡಿಯಲ್ಲಿ ತಳ್ಳಿಕೊಂಡು ಎಟಿಎಂ ಯಂತ್ರ ಕದ್ದೊಯ್ದ ಕಳ್ಳರು

ಬೆಂಗಳೂರು: ತಳ್ಳುಗಾಡಿ ಬಳಸಿ ಎಟಿಎಂ ಯಂತ್ರವನ್ನು ಕಳ್ಳತನ ಮಾಡಿರುವ ಘಟನೆ ಬೆಳಗಾವಿಯ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ.
ಡಿ.2ರ ನಸುಕಿನ ಜಾವ 3 ಗಂಟೆಯ ವೇಳೆಗೆ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ಇಂಡಿಯಾ ಒನ್ ಎಟಿಎಂಗೆ ಖದೀಮರು ಕನ್ನ ಹಾಕಿದ್ದಾರೆ. ಮೂರು ಜನ ಕಳ್ಳರು ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ಗ್ಯಾಸ್ ಕಟ್ಟರ್‌ ಯಂತ್ರವನ್ನು ಹೊತ್ತುಕೊಂಡು ಬಂದಿದ್ದಾರೆ. ಸರ್ವಿಸ್ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಕಳ್ಳರ ವಾಹನದಲ್ಲಿ ಬಾರದೆ ಅಲ್ಲೇ ಪಕ್ಕದಲ್ಲೇ ಇದ್ದ ತಳ್ಳು ಗಾಡಿ ತಂದು ಎಟಿಎಂ ಮುಂದೆ ನಿಲ್ಲಿಸಿದ್ದಾರೆ.

ಒಳ ಹೋಗಿ ಮೊದಲು ಸೈರನ್‌ಗೆ ಬ್ಲ್ಯಾಕ್‌ ಸ್ಪ್ರೇ ಹೊಡೆದಿದ್ದಾರೆ. ಸೈರನ್‌ ಬಂದ್‌ ಆಗಿರುವುದನ್ನು ದೃಢಪಡಿಸಿದ ಬಳಿಕ ಗ್ಯಾಸ್ ಕಟ್ಟರ್‌ ಬಳಸಿ ಯತ್ರವಿದ್ದ ಬಾಕ್ಸ್ ಓಪನ್ ಮಾಡಿದ್ದಾರೆ. ನಂತರ ತಳ್ಳು ಗಾಡಿಯಲ್ಲಿ ಯತ್ರವನ್ನು ಇಟ್ಟುಕೊಂಡು ಇನ್ನೂರು ಮೀಟರ್ ತಳ್ಳಿಕೊಂಡು ವಾಹನದತ್ತ ಬಂದಿದ್ದಾರೆ. ಬಳಿಕ ಎಟಿಎಂ ಯಂತ್ರವನ್ನು ವಾಹನದ ಒಳಗಡೆ ಹಾಕಿ ಮತ್ತೆ ಆ ತಳ್ಳುಗಾಡಿಯನ್ನು ಎಟಿಎಂ ಮುಂದೆ ನಿಲ್ಲಿಸಿ ಖದೀಮರು ಎಸ್ಕೇಪ್ ಆಗಿದ್ದಾರೆ. ಆದರೆ ಎಟಿಎಂ ಯಂತ್ರವನ್ನು ಒಡೆಯಲು ಸಾಧ್ಯವಾಗದೆ ಅಲ್ಲೆ ಸಮೀಪದಲ್ಲಿ ಎಸೆದು ಹೋಗಿದ್ದಾರೆ.

ಎಟಿಎಂ ಯಂತ್ರದ ಬೆಲೆ 2 ಲಕ್ಷ ರೂ. ಆಗಿದ್ದರೆ ಯಂತ್ರದ ಒಳಗಡೆ 1.9 ಲಕ್ಷ ರೂ. ಹಣವಿತ್ತು. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ವಂಟಮೂರಿ ಗ್ರಾಮದ ಸುತ್ತಮುತ್ತಲು ಹುಡುಕಾಟ ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಎಟಿಎಂ ಹಣದ ಮಷಿನ್ ಕಳ್ಳತನ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದ್ದು ಜನರು ಬೆಚ್ಚಿ ಬಿದ್ದಿದ್ದಾರೆ. ನಗರ ಪೊಲೀಸ್ ಆಯುಕ್ತ ಭೂಷನ್ ಬೋರಸೆ, ಕಳ್ಳರು ಕಟ್ಟರ್‌ ಮೂಲಕ ಯಂತ್ರ ಕೊರೆಯಲು ಯತ್ನಿಸಿದ್ದಾರೆ. ಯಂತ್ರ ತೆರೆಯದ ಕಾರಣ ಅರ್ಧ ಕಿ.ಮೀ ದೂರದಲ್ಲಿ ಎಸೆದು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.





















































 
 
error: Content is protected !!
Scroll to Top