ಬೆಂಗಳೂರು: ಮಹಿಳೆಯರು ಮತ್ತು ಬಡವರ ಪರ ಕಾಳಜಿ ವಹಿಸಿ ಹಲವಾರು ಯೋಜನೆಗಳನ್ನು ಜಾರಿಗೆ ತಂದದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಆದರೂ ಜನರು ಮೋದಿ ಮೋದಿ ಎಂದೇ ಕೂಗುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಅಸಮಾಧಾನ ಹೊರಹಾಕಿದ್ದಾರೆ.
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಲ ಜೀವನ್ ಮಿಷನ್ ಯೋಜನೆಗೆ ಕೇಂದ್ರ ಸರ್ಕಾರ ಏನನ್ನೂ ನೀಡಿಲ್ಲ. ನಾವೇ ಹೆಚ್ಚು ಅನುದಾನ ನೀಡಿದವರು. ಸಾರ್ವಜನಿಕರು ಅವರ ಮೇಲೆ ಒತ್ತಡ ಹಾಕುವುದೇ ಇಲ್ಲ. ಕಬ್ಬಿಗೆ ಎಫ್ಆರ್ಪಿ, ಸಕ್ಕರೆಗೆ ಎಂಎಸ್ಪಿ, ಎಥೆನಾಲ್ ಹಂಚಿಕೆ, ಮೆಕ್ಕೆಜೋಳಕ್ಕೆ ಎಂಎಸ್ಪಿ ನಿಗದಿ ಮಾಡಬೇಕಾದದ್ದು ಕೇಂದ್ರ ಸರ್ಕಾರ. ಅದಕ್ಕೂ ನಮ್ಮನ್ನೇ ಪ್ರಶ್ನೆ ಮಡುತ್ತೀರಿ. ಇದೆಲ್ಲಾ ಕೇಂದ್ರ ಸರ್ಕಾರದ ಜವಾಬ್ದಾರಿಯೇ ಅಲ್ಲ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳುತ್ತಾರೆ. ಇದೊಂದು ಬುರುಡೆ ಗ್ಯಾಂಗ್ ಎಂದು ಟೀಕಿಸಿದರು.
ಯಾವುದೇ ರೀತಿಯ ಜನಪರ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿಲ್ಲ. ಜನರಲ್ಲಿ ಬಿಜೆಪಿ ವಿರುದ್ಧ ಅವಿಶ್ವಾಸ ಇದೆ. ಹೀಗಿದ್ದರೂ ಅವರು ನಮ್ಮ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಲು ಹೊರಟಿರುವುದು ಹಾಸ್ಯಾಸ್ಪದ ಎಂದು ಅಣಕಿಸಿದ್ದಾರೆ.
























