ಪುತ್ತೂರು : ಕ್ಲಿನಿಕ್ನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕ್ಲಿನಿಕ್ ಒಳಗೆ ದಾಂಧಲೆ ಎಸಗಿದ ಘಟನೆ ಶನಿವಾರ ಬೆಳಗ್ಗೆ ಪುತ್ತೂರಿನಲ್ಲಿ ಸಂಭವಿಸಿದೆ. ನಗರದ ದರ್ಬೆಯ ಗಣೇಶ್ ಕಾಂಪ್ಲೆಕ್ಸ್ನಲ್ಲಿರುವ ಡಾ.ರಾಮ್ಮೋಹನ್ ಎಂಬವರ ಕ್ಲಿನಿಕ್ನಲ್ಲಿ ಈ ಘಟನೆ ನಡೆದಿದೆ.
ದಿನವಡೀ ರೋಗಿಗಳಿಂದ ತುಂಬಿರುವ ಈ ಕ್ಲಿನಿಕ್ನಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಟೋಕನ್ ನೀಡುವ ವ್ಯವಸ್ಥೆಯಿದೆ. ಇಂದು ಬೆಳಗ್ಗೆ 6.30ರ ವೇಳೆಗೆ ಕ್ಲಿನಿಕ್ ಮುಂಭಾಗದ ರಸ್ತೆಯ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ವ್ಯಕ್ತಿ ಬಂದು ತನ್ನ ಪರಿಚಯದವರಿಗೆ ಬೇಗ ಹೋಗುವ ಟೋಕನ್ ನೀಡದಿರುವ ಕುರಿತು ಕ್ಲಿನಿಕ್ನ ಸಿಬ್ಬಂದಿ ಶ್ರೀಕಾಂತ್ ಎಂಬವರ ಬಳಿ ಆಕ್ಷೇಪ ಎತ್ತಿದ್ದಾನೆ.
ರೋಗಿಗಳನ್ನು ನಂಬರ್ ಪ್ರಕಾರವೇ ಕಳುಹಿಸುವುದಾಗಿ ಶ್ರೀಕಾಂತ್ ಹೇಳಿದ್ದು, ಇದರಿಂದ ಸಿಟ್ಟಿಗೆದ್ದ ವ್ಯಕ್ತಿ ಶ್ರೀಕಾಂತ್ ಮೇಲೆ ಕೂಗಾಡಿ ಹಲ್ಲೆ ಮಾಡಿದ್ದಾನೆ. ಬಳಿಕ ಕ್ಲಿನಿಕ್ ಒಳಗೆ ನುಗ್ಗಿ ಪೀಠೋಪಕರಣಗಳನ್ನು ಒಡೆದುಹಾಕಿ ದಾಂಧಲೆ ಎಸಗಿದ್ದಾನೆ. ಶ್ರೀಕಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
























