ಇಂದು ಕರಾವಳಿ ಪೂರ್ತಿ ಮೋದಿಮಯ
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿ ಹಿನ್ನೆಲೆಯಲ್ಲಿ ಮಲ್ಪೆ ಕಡಲ ತೀರದಲ್ಲಿ ಕಲಾವಿದರು ಮೋದಿ ಸ್ವಾಗತಕ್ಕೆ ವಿಶೇಷ ಆಕರ್ಷಕ ಮರಳಿನ ಕಲಾಕೃತಿ ರಚಿಸಿದ್ದಾರೆ. ಸ್ಯಾಂಡ್ ಥೀಮ್ ಕಲಾವಿದರು ಮರಳು ಶಿಲ್ಪ ರಚಿಸಿದ್ದು, ಕಡೆಗೋಲು ಕೃಷ್ಣನ ಜೊತೆ ಪ್ರಧಾನಿ ನರೇಂದ್ರ ಮೋದಿಯ ಚಿತ್ರ ರಚಿಸಲಾಗಿದೆ. ಮರಳಿನ ಚಿತ್ರಕ್ಕೆ ಬಣ್ಣ ಕೊಡಲಾಗಿದೆ. ಕಲಾವಿದ ಹರೀಶ್ ಸಾಗ ಮತ್ತು ತಂಡದವರು ನಿನ್ನೆ ದಿನವಿಡೀ ಪರಿಶ್ರಮ ಪಟ್ಟು ಇದನ್ನು ಮಾಡಿದ್ದಾರೆ.
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟು ಲಕ್ಷಕಂಠ ಗೀತಾ ಪಠಣ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸ್ವತಃ ಮೋದಿಯೇ ಭಗವದ್ಗೀತೆಯ 15ನೇ ಅಧ್ಯಾಯದ ಶ್ಲೋಕಗಳನ್ನು ಪಠಿಸಲಿದ್ದಾರೆ. ಗೀತೆಯಲ್ಲಿ ಹೆಚ್ಚಿನ ಮಹತ್ವ ಹೊಂದಿರುವ 15ನೇ ಅಧ್ಯಾಯದ ಕೊನೆಯ 10 ಶ್ಲೋಕಗಳನ್ನು ಪಠಿಸಲಿದ್ದಾರೆ. ಸುಮಾರು 25,000 ಜನ ಕುಳಿತುಕೊಳ್ಳುವ ಸುಸಜ್ಜಿತ ಪೆಂಡಾಲನ್ನು ಈ ಕಾರ್ಯಕ್ರಮಕ್ಕಾಗಿ ಸಿದ್ಧ ಮಾಡಲಾಗಿದೆ.
ಭಗವದ್ಗೀತೆ ಪಠಣ ಮಾಡುವವರು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯನ್ನು ಸಂಪೂರ್ಣವಾಗಿ ಹವಾನಿಯಂತ್ರಿತ ಮಾಡಲಾಗಿದೆ. ಪೆಂಡಾಲಿಗೆ 5 ಬೃಹತ್ ಫ್ಯಾನ್ ಅಳವಡಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನು ಮಠವೇ ಮಾಡಿದ್ದು, ನೀರಿನ ಬ್ಯಾಗ್, ಬಾಟಲ್, ತಿಂಡಿ ತಿನಿಸು, ತರುವಂತಿಲ್ಲ. ಸಮಾವೇಶದ ನಂತರ ಒಂದು ಲಕ್ಷ ಜನಕ್ಕೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ.
ಮೋದಿ ಬಂಗಾರದ ತೀರ್ಥ ಮಂಟಪ ಉದ್ಘಾಟನೆ ಮಾಡಲಿದ್ದಾರೆ. ಕೃಷ್ಣಮಠದ ಗರ್ಭಗುಡಿಯ ಹೊರ ಭಾಗದಲ್ಲಿರುವ ತೀರ್ಥ ಮಂಟಪವನ್ನು ಸಂಪೂರ್ಣವಾಗಿ ಬಂಗಾರದಿಂದ ಮುಚ್ಚಲಾಗಿದೆ. 4 ಕಂಬಗಳು, ಮೇಲ್ಛಾವಣಿಗೆ ಬಂಗಾರ ಹಾಸಲಾಗಿದೆ. ಶಂಖ, ಚಕ್ರ, ಗಧಾ, ಪದ್ಮ, ಗಜಪಕ್ಷಿ ಅಲಂಕಾರ ರಚಿಸಲಾಗಿದೆ. ತಮಿಳುನಾಡಿನ ಉದ್ಯಮಿ ರವಿ ಶ್ಯಾಮ್, ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ 50ನೇ ವರ್ಷದ ಸನ್ಯಾಸ ದೀಕ್ಷೆ ಹಿನ್ನೆಲೆಯಲ್ಲಿ ಈ ಸೇವೆಯನ್ನು ನೀಡುತ್ತಿದ್ದಾರೆ.
ಬಂದೋಬಸ್ತ್ಗೆ 3000ಕ್ಕೂ ಹೆಚ್ಚು ಪೊಲೀಸರು
ಬಂದೋಬಸ್ತ್ಗೆ 3000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. 10 ಮಂದಿ ಎಸ್ಪಿ, 27 DySPಗಳು, 49 ಇನ್ಸ್ಪೆಕ್ಟರ್ಗಳು, 127 PSI, 232 ASI, 1608 ಪಿಸಿಗಳು, 39 ಮಹಿಳಾ ಸಿಬ್ಬಂದಿ, 6 KSRP ತುಕಡಿ, 6 ಕ್ಯೂಆರ್ಟಿ ತಂಡಗಳನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮಾರ್ಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರೋಡ್ ಶೋ ಮಾರ್ಗದುದ್ದಕ್ಕೂ ಪೊಲೀಸರಿಂದ ನಿರಂತರ ತಪಾಸಣೆ ನಡೆಸಲಾಗಿದೆ. ಜತೆಗೆ ನಗರದ ಎಲ್ಲಾ ಕಡೆ ಬಾಂಬ್ ಸ್ಕ್ವಾಡ್ಗಳಿಂದ ತಪಾಸಣೆ ನಡೆಸಲಾಗ್ತಿದೆ.
























