ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸುಳ್ಯ ವತಿಯಿಂದ ಅಜ್ಜಾವರ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆಯನ್ನು SDMC ಅಧ್ಯಕ್ಷ ಪ್ರಕಾಶ್ ಕಣೆಮರಡ್ಕ ವಹಿಸಿದ್ದರು.
ಅಜ್ಜಾವರ ವಲಯದ ಜನ ಜಾಗೃತಿ ಅಧ್ಯಕ್ಷ ಶಿವಪ್ರಕಾಶ್ ಅಡ್ಪಂಗಾಯ ಅವರು ಉದ್ಘಾಟನೆ ಮಾಡಿ ಪ್ರಾಸ್ತಾವಿಕವಾಗಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ವ್ಯಕ್ತಿತ್ವ ವಿಕಸನ ಹಾಗೂ ಸ್ವಾಸ್ಥ್ಯ ಸಂಕಲ್ಪ ತರಬೇತುದಾರಾದ ಡಾ. ಅನುರಾಧಾ ಕುರುಂಜಿ (ಉಪನ್ಯಾಸಕರು) ಮಾತನಾಡಿ, ಯುವಜನತೆ ಮನಸ್ಸು ಮತ್ತು ಬುದ್ಧಿಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದೇ ದುಶ್ಚಟ ಮುಕ್ತ ಸಮಾಜಕ್ಕೆ ಬುನಾದಿ. ದುಶ್ಚಟಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳದೆ, ಸಾಮಾಜಿಕ ಜಾಲತಾಣಕ್ಕೆ ಸಿಲುಕದೆ, ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತಿ ಮುಖ್ಯ. ವಿದ್ಯಾರ್ಥಿಗಳು ಹಿರಿಯರಿಗೆ,ತಂದೆ ತಾಯಿಗೆ, ಗುರುಗಳಿಗೆ,ಗೌರವ ನೀಡುವಂತೆ ತಿಳಿಸಿದರು. ದುಶ್ಚಟಕ್ಕೆ ಬಲಿಯಾಗದೆ ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ಪಡೆದು ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಮುಖ್ಯೋಪಾಧ್ಯಾಯ ಗೋಪಿನಾಥ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವಾರು ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಅನುದಾನಗಳನ್ನು ನೀಡುತ್ತಿದ್ದು, ಮಾದರಿ ಸಂಸ್ಥೆಯಾಗಿದೆ. ಇದರಿಂದ ಸಮಾಜಕ್ಕೆ ತುಂಬಾ ಪ್ರಯೋಜನವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಅಜ್ಜಾವರ ಮಹೇಶ ಮರ್ದಿನಿ ದೇವಸ್ಥಾನದ ಟ್ರಸ್ಟಿ ಶಶ್ಮಿ ಭಟ್ ಉಪಸ್ಥಿತರಿದ್ದರು.
ಶಿಕ್ಷಕ ಅಶೋಕ್ ಸ್ವಾಗತಿಸಿ, ಸೇವಾ ಪ್ರತಿನಿಧಿಯಾದ ವೇದಾವತಿಯವರು ವಂದಿಸಿದರು. ವಲಯದ ಮೇಲ್ವಿಚಾರಕಿ ಅನಿತಾ ನಿರೂಪಿಸಿದರು.
























