ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್( ರಿ) ಸುಳ್ಯ ತಾಲೂಕು, ಸುಳ್ಯ ವಲಯ ಗಾಂಧಿನಗರ ಕಾರ್ಯಕ್ಷೇತ್ರದ ವತಿಯಿಂದ ಆಲೆಟ್ಟಿ ಮಿತಡ್ಕ ರೋಟರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಭಾಗದ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿ ಡಾ. ಅನುರಾಧ ಕುರುಂಜಿ ಮಾತನಾಡಿ, ಯುವ ಮನಸ್ಸುಗಳು ಎಚ್ಚೆತ್ತುಕೊಂಡಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ. ದುಶ್ಚಟಕ್ಕೆ ಬಲಿಯಾಗಿ ಅನುಭವಿಸುವ ಕಷ್ಟ ನಷ್ಟಗಳು ಮತ್ತು ದುಶ್ಚಟಕ್ಕೆ ಬಲಿಯಾದಾಗ ಕೌಟುಂಬಿಕ ಹಾಗೂ ಸಾಮಾಜಿಕ ವಲಯಗಳಲ್ಲಾಗುವ ಸಮಸ್ಯೆಗಳನ್ನು ವಿವರವಾಗಿ ತಿಳಿಸಿದರು. ಸಾಮಾಜಿಕ ಜಾಲತಾಣಗಳಿಂದ ಆಗುವ ತೊಂದರೆಗಳ ಕುರಿತು ಮಾಹಿತಿ ನೀಡಿದರು, ಎಲ್ಲಾ ವಿದ್ಯಾರ್ಥಿಗಳು ಗುರು ಹಿರಿಯರಿಗೆ ಗೌರವ ಕೊಡುವುದನ್ನು, ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದನ್ನು ಕಲಿತಾಗ ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿ ಸಮಾಜಕ್ಕೆ ಸ್ವಾಮಿ ವಿವೇಕಾನಂದರಂತೆ ಆದರ್ಶ ವ್ಯಕ್ತಿ ಮತ್ತು ಉತ್ತಮ ಪ್ರಜೆಗಳಾಗಬೇಕೆಂದು ಹಾರೈಸಿದರು.
ವಲಯ ಮೇಲ್ವಿಚಾರಕ ದಿನೇಶ್ ಪ್ರಾಸ್ತವಿಕವಾಗಿ ಯೋಜನೆಯ ಹಿನ್ನಲೆ, ಕಾರ್ಯಕ್ರಮದ ಧ್ಯೇಯ ಉದ್ದೇಶ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಪಿಯುಸಿ ನಂತರದ ವೃತ್ತಿಪರ ವಿದ್ಯಾಭ್ಯಾಸಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುಜ್ಞಾನ ನಿಧಿ ಸೌಲಭ್ಯದ ಬಗ್ಗೆ, ಜ್ಞಾನದೀಪ ಶಿಕ್ಷಕರ ನೇಮಕದ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿಕದ್ದ ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ವಸಂತ್ ಅವರು, ಮಾಹಿತಿ ಮಾರ್ಗದರ್ಶನ ನೀಡಿದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿ ಯಶಸ್ವಿ ಪಿ. ಭಟ್ ಪ್ರಾರ್ಥಿಸಿದರು, ಕಾಲೇಜು ಪ್ರಾಂಶುಪಾಲೆ ಶೋಭಾ ಬೊಮೆಟ್ಟಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು, ಸುಳ್ಯ ವಲಯದ ಮೇಲ್ವಿಚಾರಕ ದಿನೇಶ್ ಧನ್ಯವಾದ ಸಮರ್ಪಿಸಿದರು.
























